ಸಿಂಧನೂರು, ಮೇ 8
ಸರ್ಕಾರಿ ಆಸ್ಪತ್ರೆಗಳ ಸೇವೆ ಕುರಿತು ಸಮಾಜದಲ್ಲಿ ಹಲವಾರು ಅಪನಂಬಿಕೆಗಳು ಇರುವ ನಡುವೆಯೇ, ಸಿಂಧನೂರಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ (MCH) ವೈದ್ಯರು ಹಾಗೂ ಸಿಬ್ಬಂದಿ ವರ್ಗ ಮಾನವೀಯತೆ, ತುರ್ತು ಚಿಕಿತ್ಸಾ ಸಾಮರ್ಥ್ಯ ಮತ್ತು ವೃತ್ತಿಪರ ನಿಷ್ಠೆಗೆ ಜೀವಂತ ಉದಾಹರಣೆಯಾಗಿದ್ದಾರೆ. ಅತ್ಯಂತ ಸಂಕೀರ್ಣ ವೈದ್ಯಕೀಯ ಪರಿಸ್ಥಿತಿಯಲ್ಲಿದ್ದ ಗರ್ಭಿಣಿಯೊಬ್ಬರ ಜೀವವನ್ನು ಉಳಿಸುವ ಜೊತೆಗೆ ಮಗುವಿಗೂ ಸುರಕ್ಷಿತ ಜನ್ಮ ನೀಡುವ ಮೂಲಕ ವೈದ್ಯರ ತಂಡ ಅಪರೂಪದ ಸಾಹಸ ಮೆರೆದಿದೆ.

34 ವಾರಗಳ ಗರ್ಭಿಣಿಯಾಗಿದ್ದ ಶ್ರೀಮತಿ ಸೃಷ್ಟಿ ಅವರನ್ನು ತೀವ್ರ ರಕ್ತದೊತ್ತಡದ ಸಮಸ್ಯೆಯೊಂದಿಗೆ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಗೆ ದಾಖಲಾಗುವ ವೇಳೆಗೆ ಅವರ ರಕ್ತದೊತ್ತಡ 210/120 mmHg ಮಟ್ಟದಲ್ಲಿದ್ದು, ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಶ್ವಾಸಕೋಶದಲ್ಲಿ ನೀರು ತುಂಬಿಕೊಂಡ ಪರಿಣಾಮ ಉಸಿರಾಟದ ತೀವ್ರ ತೊಂದರೆ ಉಂಟಾಗಿದ್ದು, ಆಮ್ಲಜನಕದ ಪ್ರಮಾಣ (SPO2) ಕೇವಲ 40 ಶೇಕಡಕ್ಕೆ ಇಳಿದಿತ್ತು. ವೈದ್ಯಕೀಯವಾಗಿ ಇದು ‘ನಿಯರ್ ಮಿಸ್’ ಪ್ರಕರಣವೆಂದು ಪರಿಗಣಿಸಲಾಗುತ್ತದೆ.

ರೋಗಿಯ ಸ್ಥಿತಿ ಅತ್ಯಂತ ಗಂಭೀರವಾಗಿದ್ದ ಕಾರಣ ಅವರನ್ನು ಉನ್ನತ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಸಾಗಿಸಲು ಸಮಯವೇ ಇರಲಿಲ್ಲ. ಪ್ರತಿ ಕ್ಷಣವೂ ಜೀವಾಪಾಯದ ಆತಂಕ ಮೂಡಿಸುತ್ತಿದ್ದ ಸಂದರ್ಭದಲ್ಲಿ MCH ಆಸ್ಪತ್ರೆಯ ವೈದ್ಯರು ಎದೆಗುಂದದೆ ಕಾರ್ಯಪ್ರವೃತ್ತರಾದರು. ತಕ್ಷಣವೇ ಖಾಸಗಿ ಆಸ್ಪತ್ರೆಯಿಂದ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದ್ದು, ವೈದ್ಯಕೀಯ ತಂಡ ಜೀವ ಉಳಿಸುವ ಹೋರಾಟ ಆರಂಭಿಸಿತು.

ಶಸ್ತ್ರಚಿಕಿತ್ಸೆ ವೇಳೆ “ಆನ್ ಟೇಬಲ್ ಡೆತ್” ಸಂಭವಿಸುವ ಅಪಾಯವಿದ್ದರೂ, ವೈದ್ಯರ ಮೇಲಿನ ನಂಬಿಕೆಯಿಂದ ಕುಟುಂಬಸ್ಥರು ಚಿಕಿತ್ಸೆಗೆ ಒಪ್ಪಿಗೆ ನೀಡಿದರು. ಬಳಿಕ ವೈದ್ಯರಾದ ಡಾ. ಶಕುಂತಲಾ ಪಾಟೀಲ್, ಡಾ. ಕಾವೇರಿ ಶಾವಿ, ಡಾ. ವಿದ್ಯಾ, ಡಾ. ಶೋಭಾ, ಡಾ. ಫರ್ಹತ್ ಹಾಗೂ ಡಾ. ಹನುಮಂತ ರೆಡ್ಡಿ ಅವರ ನೇತೃತ್ವದ ತಂಡ ತುರ್ತು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಿ ಜೀವಂತ ಮಗುವನ್ನು ಹೊರತೆಗೆದರು. ಶಸ್ತ್ರಚಿಕಿತ್ಸೆಯ ನಂತರ ತಾಯಿಯನ್ನು ವೆಂಟಿಲೇಟರ್ ನೆರವಿನೊಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು.

ವೈದ್ಯರು ಮತ್ತು ಸಿಬ್ಬಂದಿ ವರ್ಗದ ಸತತ ಪರಿಶ್ರಮದ ಫಲವಾಗಿ ಶ್ರೀಮತಿ ಸೃಷ್ಟಿ ಅವರು ಇದೀಗ ವೆಂಟಿಲೇಟರ್ನಿಂದ ಹೊರಬಂದು ಚೇತರಿಸಿಕೊಳ್ಳುತ್ತಿದ್ದಾರೆ. ಮಗು ಕೂಡ ಎನ್ಐಸಿಯುನಲ್ಲಿ ಸುರಕ್ಷಿತವಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಯಶಸ್ವಿ ಚಿಕಿತ್ಸೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು (DHO) ಹಾಗೂ DRCHO ಅವರ ಪ್ರೋತ್ಸಾಹ ಮತ್ತು ಬೆಂಬಲ ಮಹತ್ವದ ಪಾತ್ರ ವಹಿಸಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಸಿಬ್ಬಂದಿ ಕೊರತೆ, ರಾಜಕೀಯ ಹಸ್ತಕ್ಷೇಪ ಹಾಗೂ ಸಾಮಾಜಿಕ ಒತ್ತಡಗಳ ನಡುವೆಯೂ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಸೇವಾಭಾವದಿಂದ ಕಾರ್ಯನಿರ್ವಹಿಸಿದ ಪರಿಣಾಮ ತಾಯಿ-ಮಗುವಿನ ಜೀವ ಉಳಿದಿದೆ. ವೈದ್ಯರಿಗೆ ಸೂಕ್ತ ವಾತಾವರಣ ಹಾಗೂ ಸಾರ್ವಜನಿಕರ ವಿಶ್ವಾಸ ದೊರೆತರೆ ಸರ್ಕಾರಿ ಆಸ್ಪತ್ರೆಗಳಲ್ಲೂ ಅತ್ಯುತ್ತಮ ಚಿಕಿತ್ಸೆ ಸಾಧ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.
ಈ ಜೀವ ರಕ್ಷಕ ಕಾರ್ಯಾಚರಣೆಯಲ್ಲಿ ಭಾಗಿಯಾದ ಶುಶ್ರೂಷಾ ಅಧಿಕಾರಿಗಳಾದ ಶಾರದಾ, ಜಯಂತಿ, ಪುಷ್ಪರಾಣಿ, ಗೌತಮಿ, ಚೈತ್ರಾ ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದ ಸೇವೆಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.

“ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ವೈದ್ಯರು ಮತ್ತು ಸಿಬ್ಬಂದಿ ವರ್ಗಕ್ಕೆ ನಮ್ಮೆಲ್ಲರ ದೊಡ್ಡ ಸಲಾಂ” ಎಂದು ಮಕ್ಕಳ ತಜ್ಞರಾದ ಡಾ. ಶಿವರಾಜ್ ತಿಳಿಸಿದ್ದಾರೆ.













