📰 ಸಭೆ ಇಲ್ಲದೆ 50 ಲಕ್ಷ ಬಿಲ್? ರೌಡಕುಂದ ಪಂಚಾಯತಿಯಲ್ಲಿ ಅಕ್ರಮ ಆರೋಪ – ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ರೌಡಕುಂದ ಗ್ರಾಮ ಪಂಚಾಯತಿಯಲ್ಲಿ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ರೌಡಕುಂದ ಗ್ರಾಮ ಪಂಚಾಯಿತಿಯ ಸಾರ್ವಜನಿಕರು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಿರುವ ದೂರಿನಲ್ಲಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಸಭೆ ನಡೆಸದೆ ಹೆಚ್ಚುವರಿ ಕ್ರಿಯಾ ಯೋಜನೆಗಳನ್ನು ತಯಾರಿಸಿ ಬೋಗಸ್ ಬಿಲ್ಲುಗಳನ್ನು ಎತ್ತುವಳಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಗ್ರಾಮ ಪಂಚಾಯತಿ ವ್ಯಾಪ್ತಿಯ ಬಂಗಾರಿ ಕ್ಯಾಂಪ್, ವೆಂಕಟಗಿರಿ ಕ್ಯಾಂಪ್, ಲಕ್ಷ್ಮೀ ಕ್ಯಾಂಪ್ ಹಾಗೂ ರಾಮ ಕ್ಯಾಂಪ್ ಪ್ರದೇಶಗಳಲ್ಲಿ ಸುಮಾರು 15ರಿಂದ 20 ಲಕ್ಷ ರೂಪಾಯಿಗಳವರೆಗೆ ಅಕ್ರಮ ನಡೆದಿದೆ ಎಂದು ದೂರಿನಲ್ಲಿ ಹೇಳಲಾಗಿದ್ದು, ಒಟ್ಟು ವ್ಯವಹಾರ 45ರಿಂದ 50 ಲಕ್ಷ ರೂಪಾಯಿಗಳವರೆಗೆ ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
📌 ಆರೋಪಗಳ ವಿವರ
ಯಾವುದೇ ಸಭೆ ನಡೆಸಿ ನಿರ್ಣಯ ತೆಗೆದುಕೊಳ್ಳದೆ ಕೆಳಗಿನ ಕೆಲಸಗಳ ಹೆಸರಿನಲ್ಲಿ ಹಣ ಎತ್ತುವಳಿ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ:
ವಿವಿಧ ಕ್ಯಾಂಪ್ಗಳಲ್ಲಿ IMASS BULB ಲೈಟ್ ಅಳವಡಿಕೆ
ವೆಂಕಟಗಿರಿ ಮತ್ತು ಬಂಗಾರಿ ಕ್ಯಾಂಪ್ಗಳ ಬಸ್ ನಿಲ್ದಾಣಗಳಿಗೆ ಮೇಲ್ಚಾವಣಿ ಹಾಕಿದಂತೆ ಬಿಲ್ಲು
ಬಸ್ ನಿಲ್ದಾಣಗಳಿಗೆ ಸುಣ್ಣ ಬಣ್ಣ ಹಚ್ಚಿದಂತೆ ದಾಖಲೆ
ಲಕ್ಷ್ಮೀ ಕ್ಯಾಂಪಿನ O.H.T. ಟ್ಯಾಂಕ್ ಸ್ವಚ್ಛತೆ ಕೆಲಸ
ಕುಡಿಯುವ ನೀರಿನ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಸ್ಥೆ
ಬ್ಲೀಚಿಂಗ್ ಪೌಡರ್ ಒಂದೇ ಬಾರಿ ಖರೀದಿ ಮಾಡಿ ಮೂರು ಬಾರಿ ಬಿಲ್ ಎತ್ತುವಳಿ
ವಿದ್ಯುತ್ ಮೋಟಾರ್ ಖರೀದಿ ಮಾಡಿದಂತೆ ಬಿಲ್ಲು ಇದ್ದರೂ ಸ್ಥಳದಲ್ಲಿ ಮೋಟಾರ್ಗಳಿಲ್ಲ
ಈ ಎಲ್ಲಾ ಅಕ್ರಮಗಳನ್ನು ಅಧಿಕಾರಿಗಳು ಸ್ವಇಚ್ಛೆಯಿಂದ ಹಾಗೂ ರಾಜಕೀಯ ಒತ್ತಡದ ಹಿನ್ನೆಲೆದಲ್ಲಿ ನಡೆಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಸರ್ಕಾರದ ಹಣವನ್ನು ಸಾರ್ವಜನಿಕರ ಹಿತಕ್ಕೆ ಬಳಸದೇ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
⚠️ ಅಧಿಕಾರಿಗಳು ‘ಕಾಣೆ’ – ಜನರಿಗೆ ಸ್ಪಂದನೆ ಇಲ್ಲ
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸಾರ್ವಜನಿಕರಿಗೆ, ಸಂಘ ಸಂಸ್ಥೆಗಳಿಗೆ ಹಾಗೂ ಮಾಧ್ಯಮದವರಿಗೆ ಕೈಗೆ ಸಿಗದಂತಾಗಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಕರೆ ಮಾಡಿದರೂ ಸ್ವೀಕರಿಸದೇ, ಹಿಂದಿರುಗಿ ಕರೆ ಮಾಡುವ ಸೌಜನ್ಯವನ್ನೂ ತೋರಿಸದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
⏰ ಸಮಯ ಪಾಲಿಸದ ಅಧಿಕಾರಿ – ಸಾರ್ವಜನಿಕರ ಆಕ್ರೋಶ ಹೆಚ್ಚಳ
ಬೇಸಿಗೆ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳ ಸಮಯ ಬೆಳಗ್ಗೆ 8:00ರಿಂದ ಮಧ್ಯಾಹ್ನ 1:30ರವರೆಗೆ ನಿಗದಿಯಾಗಿದ್ದರೂ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ 11 ಗಂಟೆಯಾದರೂ ಕಚೇರಿಗೆ ಆಗಮಿಸದೇ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸದೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
🗣️ ಅಧಿಕಾರಿಗಳ ಸ್ಪಷ್ಟನೆ
ಈ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿದ ರೌಡಕುಂದ ಗ್ರಾಮ ಪಂಚಾಯತಿಯ ಆಡಳಿತ ಅಧಿಕಾರಿ ಹಾಗೂ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, “ದೂರಿನಲ್ಲಿ ಮಾಡಿರುವ ಎಲ್ಲಾ ಆರೋಪಗಳು ಸತ್ಯವಲ್ಲ. ಯಾವುದೇ ಬೋಗಸ್ ಬಿಲ್ಲುಗಳನ್ನು ಮಾಡಿಲ್ಲ. ಸಭೆ ನಡೆಸದೇ ಯಾವುದೇ ಕ್ರಿಯಾ ಯೋಜನೆ ಅಥವಾ ಬಿಲ್ಲುಗಳನ್ನು ಮಾಡುವುದು ಸಾಧ್ಯವಿಲ್ಲ. ಕೆಲ ಸಣ್ಣಪುಟ್ಟ ಕೆಲಸಗಳು ನಡೆದಿದ್ದು, ಅವು ನಿಯಮಾನುಸಾರವೇ ನಡೆದಿವೆ” ಎಂದು ಸ್ಪಷ್ಟನೆ ನೀಡಿದ್ದಾರೆ.
⚖️ ತನಿಖೆಗೆ ಆಗ್ರಹ
ಈ ಸಂಬಂಧ ಸಂಪೂರ್ಣ ತನಿಖೆ ನಡೆಸಿ, ಅಕ್ರಮವಾಗಿ ಎತ್ತುವಳಿ ಮಾಡಿರುವ ಹಣವನ್ನು ವಾಪಸ್ ವಸೂಲಿ ಮಾಡಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿದಾರರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.










