ಖಾಲಿ ಪೇಪರ್ ಮೇಲೆ ಸಹಿ ಮಾಡಿಸಿಕೊಂಡ ಆರೋಪ: ಪಿಎಸ್ಐ ವಿರುದ್ಧ ವಕೀಲರ ಆಕ್ರೋಶ
ಸಿಂಧನೂರು: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುರ್ವಿಹಾಳ ಪೊಲೀಸ್ ಠಾಣೆಯ ಪಿಎಸ್ಐ ಸುಜಾತ ಅವರ ವಿರುದ್ಧ ಖಾಲಿ ಪೇಪರ್ ಮೇಲೆ ದೂರುದಾರರಿಂದ ಸಹಿ ಮಾಡಿಸಿಕೊಂಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ವಕೀಲ ಅರಳಯ್ಯ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊ ಹಾಗೂ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿರುವ ವಕೀಲ ಅರಳಯ್ಯ, "ದೂರುದಾರರೊಬ್ಬರು ತಮ್ಮನ್ನು ಸಂಪರ್ಕಿಸಿ ಠಾಣೆಯಲ್ಲಿ ಖಾಲಿ ಪೇಪರ್ ಮೇಲೆ ಸಹಿ ಮಾಡಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಠಾಣೆಗೆ ತೆರಳಿ ವಿಚಾರಿಸಿದಾಗ ಪಿಎಸ್ಐ ಸುಜಾತ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ" ಎಂದು ಆರೋಪಿಸಿದ್ದಾರೆ.

"ಖಾಲಿ ಪೇಪರ್ ಮೇಲೆ ಸಹಿ ಮಾಡಿಸಿಕೊಳ್ಳುವುದು ಕಾನೂನಾತ್ಮಕವಾಗಿ ಸರಿಯೇ ಎಂಬ ಪ್ರಶ್ನೆಯನ್ನು ಕೇಳಿದ್ದಕ್ಕೆ ನನಗೆ ಅವಮಾನ ಮಾಡಿದ್ದಾರೆ. ಈ ಕುರಿತು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಹಾಗೂ ಬಾರ್ ಕೌನ್ಸಿಲ್ಗೆ ದೂರು ಸಲ್ಲಿಸಲು ನಿರ್ಧರಿಸಿದ್ದೇನೆ" ಎಂದು ಅವರು ತಿಳಿಸಿದ್ದಾರೆ.

ಈ ಅಧಿಕಾರಿ ಸಾರ್ವಜನಿಕರೊಂದಿಗೆ ಇದೇ ರೀತಿಯ ವರ್ತನೆ ನಡೆಸಿರುವ ಬಗ್ಗೆ ಈ ಹಿಂದೆ ಕೂಡ ದೂರುಗಳು ಕೇಳಿಬಂದಿವೆ ಎಂದು ಕೆಲವು ಸ್ಥಳೀಯರು ಆರೋಪಿಸಿದ್ದಾರೆ. ವಕೀಲರೊಂದಿಗೆ ಈ ರೀತಿಯ ವರ್ತನೆ ನಡೆದಿದ್ದರೆ ಸಾಮಾನ್ಯ ಸಾರ್ವಜನಿಕರೊಂದಿಗೆ ಯಾವ ರೀತಿಯಲ್ಲಿ ನಡೆದುಕೊಳ್ಳಬಹುದು ಎಂಬ ಪ್ರಶ್ನೆ ಸ್ಥಳೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆ ಕುರಿತು ಸಂಪೂರ್ಣ ತನಿಖೆ ನಡೆಸಿ, ಸತ್ಯಾಂಶ ಹೊರತಂದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಹಾಗೂ ವಕೀಲ ಸಮುದಾಯ ಆಗ್ರಹಿಸಿದೆ.

ಇನ್ನೊಂದೆಡೆ, ಈ ಸಂಬಂಧ ಪಿಎಸ್ಐ ಸುಜಾತ ಅವರ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಅವರ ಪ್ರತಿಕ್ರಿಯೆ ದೊರೆತಲ್ಲಿ ಪ್ರಕಟಿಸಲಾಗುವುದು. ಒಟ್ಟಾರೆ, ಖಾಲಿ ಪೇಪರ್ ಮೇಲೆ ಸಹಿ ಮಾಡಿಸಿಕೊಂಡಿರುವ ಆರೋಪ ಹಾಗೂ ವಕೀಲರೊಂದಿಗೆ ನಡೆದಿರುವ ಎನ್ನಲಾದ ವಾಗ್ವಾದ ಪ್ರಕರಣ ಇದೀಗ ಸಿಂಧನೂರು ಪೊಲೀಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಮೇಲಾಧಿಕಾರಿಗಳ ತನಿಖೆಯ ನಂತರವೇ ವಾಸ್ತವಾಂಶ ಬಹಿರಂಗವಾಗಬೇಕಿದೆ.













