“ಗಿಡ ಬೆಳೆಸಿ” ಘೋಷಣೆ ಮಾತ್ರವೇ? ಸಿಂಧನೂರಿನಲ್ಲಿ ಮರಗಳ ಮೇಲೆ ಜಾಹೀರಾತುಗಳ ಹಿಂಸೆ – ಅಧಿಕಾರಿಗಳ ಮೌನಕ್ಕೆ ಪ್ರಶ್ನೆ


📍 ಸಿಂಧನೂರು, ಮೇ 6:“ಗಿಡ ಬೆಳೆಸಿ, ಪರಿಸರ ಉಳಿಸಿ” ಎಂಬುದು ಕೇವಲ ಘೋಷಣೆಯಲ್ಲ, ಇಂದಿನ ತುರ್ತು ಅಗತ್ಯ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೆ, ಇದೇ ಮಾತುಗಳು ನೆಲಮಟ್ಟದಲ್ಲಿ ಅರ್ಥ ಕಳೆದುಕೊಳ್ಳುತ್ತಿರುವುದಕ್ಕೆ ಸಿಂಧನೂರು ನಗರವೇ ಉದಾಹರಣೆಯಾಗುತ್ತಿದೆ.
ನಗರದಲ್ಲಿ ಪರಿಸರ ಪ್ರೇಮಿಗಳು, ವಿಶೇಷವಾಗಿ ಅಮರೇಗೌಡ ಮಲ್ಲಾಪುರ ಸೇರಿದಂತೆ ಹಲವು ಸಂಘಟನೆಗಳು ಕಷ್ಟಪಟ್ಟು ಗಿಡಗಳನ್ನು ನೆಟ್ಟು, ನೀರು ಹಾಕಿ, ಪೋಷಣೆ ಮಾಡಿ ಬಿಸಿಲಿನ ನಾಡನ್ನು ಹಸಿರು ನಾಡಾಗಿ ರೂಪಿಸಲು ಶ್ರಮಿಸುತ್ತಿದ್ದಾರೆ. ಆದರೆ ಅವರ ಈ ಪ್ರಯತ್ನಗಳಿಗೆ ವಿರೋಧವಾಗಿ ನಡೆಯುತ್ತಿರುವ ಬೆಳವಣಿಗೆಗಳು ಪರಿಸರ ಹಾನಿಗೆ ಕಾರಣವಾಗುತ್ತಿವೆ.


ನಗರದ ಪ್ರಮುಖ ರಸ್ತೆಗಳಲ್ಲಿ ಬೆಳೆದಿರುವ ಮರಗಳಿಗೆ ಖಾಸಗಿ ಸಂಸ್ಥೆಗಳು ಜಾಹೀರಾತು ಫಲಕಗಳು, ಬ್ಯಾನರ್ಗಳು, ಸ್ಟಿಕ್ಕರ್ಗಳನ್ನು ಅಂಟಿಸುವುದು, ತಂತಿ ಕಟ್ಟಿ ಮೊಳೆ ಹೊಡೆಯುವುದು ಸಾಮಾನ್ಯವಾಗಿದೆ. ಇದರಿಂದ ಮರಗಳ ತೊಗಲು ಹಾನಿಗೊಂಡು, ಅವು ನಿಧಾನವಾಗಿ ಒಣಗುವ ಸ್ಥಿತಿ ಎದುರಾಗುತ್ತಿದೆ. ಪರಿಸರ ಸಂರಕ್ಷಣೆಗೆ ಪ್ರಮುಖವಾದ ಮರಗಳೇ ಇಂತಹ ಮಾನವೀಯ ನಿರ್ಲಕ್ಷ್ಯಕ್ಕೆ ಬಲಿಯಾಗುತ್ತಿವೆ.


ಇದಕ್ಕಿಂತ ಗಂಭೀರವಾದ ಸಂಗತಿ ಎಂದರೆ, ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಪ್ರಾದೇಶಿಕ ಅರಣ್ಯ ಅಧಿಕಾರಿಗಳು ಮೌನ ವಹಿಸಿರುವುದು. ಕಣ್ಣೆದುರೇ ಮರಗಳು ಹಾನಿಗೊಳಗಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಅನುಮಾನಗಳಿಗೆ ಕಾರಣವಾಗಿದೆ.
“ಇದು ಕೇವಲ ನಿರ್ಲಕ್ಷ್ಯವೇ? ಅಥವಾ ಯಾರಾದರೂ ಒತ್ತಡ, ಸ್ವಾರ್ಥ ಇದೆಯೇ?” ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಕೆಲವರು ಇದನ್ನು ‘ಮಾಮೂಲಿ ಸಂಸ್ಕೃತಿ’ಯ ಪರಿಣಾಮವೋ ಎಂಬ ಶಂಕೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಪರಿಸರ ಪ್ರೇಮಿಗಳ ಶ್ರಮವನ್ನು ಉಳಿಸಬೇಕಾದ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತರೆ, ಹಸಿರು ಭವಿಷ್ಯದ ಕನಸು ಹೇಗೆ ಸಾಕಾರವಾಗುತ್ತದೆ? ಮರಗಳನ್ನು ಉಳಿಸುವುದು ಕೇವಲ ಸಾಮಾಜಿಕ ಜವಾಬ್ದಾರಿಯಲ್ಲ, ಅದು ಕಾನೂನುಬದ್ಧ ಕರ್ತವ್ಯವೂ ಆಗಿದೆ.
👉 ತಕ್ಷಣವೇ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು, ಮರಗಳಿಗೆ ಹಾನಿ ಉಂಟುಮಾಡುತ್ತಿರುವ ಜಾಹೀರಾತುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮರಗಳನ್ನು ರಕ್ಷಿಸಲು ಕಟ್ಟುನಿಟ್ಟಿನ ನಿಯಮ ಜಾರಿಗೆ ತರಬೇಕು.
👉 ಸಾರ್ವಜನಿಕರೂ ಸಹ ಜಾಗೃತರಾಗಿ, ಮರಗಳಿಗೆ ಹಾನಿ ಮಾಡುವವರ ವಿರುದ್ಧ ಧ್ವನಿ ಎತ್ತಬೇಕು.
🌱 ಮರ ಉಳಿದರೆ ನಾಳೆ ಉಳಿಯುತ್ತದೆ – ಇಲ್ಲದಿದ್ದರೆ ಘೋಷಣೆಗಳು ಕೇವಲ ಮಾತಾಗಿಯೇ ಉಳಿಯುತ್ತವೆ.










