ರಾಯಚೂರು ಜಿಲ್ಲೆಯಲ್ಲಿ 32 ಸುಮೊಟು ಪ್ರಕರಣ ದಾಖಲು: ಮಾನವ ಹಕ್ಕುಗಳ ಆಯೋಗ
ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ ಅವರಿಂದ ಪತ್ರಿಕಾಗೋಷ್ಠಿ
ರಾಯಚೂರು, ಮಾರ್ಚ್ 26: ರಾಯಚೂರು ಜಿಲ್ಲೆಯಲ್ಲಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಕುಂದುಕೊರತೆಗಳ ವರದಿಗಳನ್ನು ಆಧರಿಸಿ ಸಾರ್ವಜನಿಕ ಹಿತಾಸಕ್ತಿಯಿಂದ ಒಟ್ಟು 32 ಸುಮೊಟು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಡಾ. ಟಿ. ಶ್ಯಾಮ್ ಭಟ್ ತಿಳಿಸಿದ್ದಾರೆ.
ಮಾರ್ಚ್ 25ರಿಂದ ರಾಯಚೂರು ಪ್ರವಾಸದಲ್ಲಿರುವ ಅವರು, ಮಾರ್ಚ್ 26ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಾರ್ಚ್ 26ರಂದು ನಡೆದ ವಿಚಾರಣೆಯಲ್ಲಿ 32 ಸುಮೊಟು ಪ್ರಕರಣಗಳ ಜೊತೆಗೆ ಆಯೋಗದಲ್ಲಿ ಈಗಾಗಲೇ ದಾಖಲಾದ 27 ದೂರುಗಳನ್ನು ಸೇರಿಸಿ ಒಟ್ಟು 59 ಪ್ರಕರಣಗಳನ್ನು ಪರಿಶೀಲಿಸಲಾಗಿದೆ. ಕೆಲವು ಪ್ರಕರಣಗಳ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ವರದಿ ಕೋರಲಾಗಿದೆ ಎಂದು ತಿಳಿಸಿದರು.
ಮಾರ್ಚ್ 25ರಂದು ರಾಯಚೂರು ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಸರ್ಕಾರಿ ಆಸ್ಪತ್ರೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಲಾಗಿದೆ. ಅಲ್ಲದೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳನ್ನು ಕೂಡ ಸಂಗ್ರಹಿಸಲಾಗಿದೆ. ಈ ಕುರಿತು ಸಭೆಯಲ್ಲಿ ಅಧಿಕಾರಿಗಳಿಂದ ಸ್ಪಷ್ಟನೆ ಪಡೆಯಲಾಗಿದೆ ಎಂದು ಹೇಳಿದರು.
ಇನ್ನು ರಾಜ್ಯ ಮಟ್ಟದಲ್ಲಿ 2022ರಿಂದ ಸುಮಾರು 8000 ಮಾನವ ಹಕ್ಕುಗಳ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಬಹುತೇಕ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಇನ್ನೂ ಸುಮಾರು 3600 ಪ್ರಕರಣಗಳು ಬಾಕಿ ಇವೆ. ಪ್ರತಿಮಾಸ ಸರಾಸರಿ 600ರಷ್ಟು ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿದ್ದು, ಒಂದು ದೂರು ವಿಲೇವಾರಿಗೆ ಕನಿಷ್ಠ ಐದಾರು ತಿಂಗಳು ಸಮಯ ಬೇಕಾಗುತ್ತದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಆಯೋಗದ ನ್ಯಾಯಿಕ ಸದಸ್ಯರಾದ ಎಸ್. ಕೆ. ವಂಟಿಗೋಡಿ ಉಪಸ್ಥಿತರಿದ್ದರು.













