ಸಿಂಧನೂರು, ಆ.21: ಹುಕ್ಕೇರಿಯಿಂದ ಕೇರಳದತ್ತ 25 ಗೋವುಗಳನ್ನು ಕಂಟೇನರ್ ಲಾರಿಯಲ್ಲಿ ಸಾಗಿಸಲಾಗುತ್ತಿತ್ತು ಎನ್ನಲಾದ ಪ್ರಕರಣವನ್ನು ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಕಾರ್ಯಕರ್ತರು ಪತ್ತೆಹಚ್ಚಿ, ಸಿಂಧನೂರು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಲಾರಿಯನ್ನು ತಡೆದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಶುಕ್ರವಾರ ನಡೆದಿದೆ.
ಹುಕ್ಕೇರಿಯಿಂದ ಕೇರಳದತ್ತ ತೆರಳುತ್ತಿದ್ದ ಕೆಎ 51 ಎಎಚ್ 4830 ನೋಂದಣಿ ಸಂಖ್ಯೆಯ ಕಂಟೇನರ್ ಲಾರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೋವುಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಕಾರ್ಯಕರ್ತರಿಗೆ ಲಭಿಸಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಕಾರ್ಯಕರ್ತ ಗೋಪಿ ಗೌಡ ಸೇರಿದಂತೆ ಇತರ ಕಾರ್ಯಕರ್ತರು ಲಾರಿಯನ್ನು ಬೆನ್ನತ್ತಿದ್ದಾರೆ.
ಕುಷ್ಟಗಿ ವರವಲಯದಿಂದ ಲಾರಿಯನ್ನು ಬೆನ್ನತ್ತಿದ ಕಾರ್ಯಕರ್ತರು ಸಿಂಧನೂರು ನಗರ ಪ್ರವೇಶಿಸಿದ ಬಳಿಕ ಲಾರಿಯನ್ನು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ತಡೆದು ನಿಲ್ಲಿಸಿದ್ದಾರೆ. ಬಳಿಕ ಸಿಂಧನೂರು ಟೌನ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ದೂರು ಸಲ್ಲಿಸಿದ್ದಾರೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಸಿಂಧನೂರು ನಗರ ಪೊಲೀಸರು ಲಾರಿಯನ್ನು ಪರಿಶೀಲಿಸಿ, ಪಂಚನಾಮೆ ನಡೆಸಿದ್ದಾರೆ. ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪೊಲೀಸರು ದಾಖಲಿಸಿರುವ ಎಫ್ಐಆರ್ ಪ್ರಕಾರ, ಪ್ರಕರಣ ಕ್ರೈಂ ನಂ. 246/2026 ಆಗಿದ್ದು, 21-08-2026ರಂದು ಸಿಂಧನೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಿಂಧನೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪ ನಡೆದಿರುವುದಾಗಿ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣದಲ್ಲಿ ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ–2020, ಜಾನುವಾರು ಸಾಗಣೆ ನಿಯಮಗಳು–2021, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ–1960, ಜಾನುವಾರು ಸಾಗಣೆ ಕಾಯ್ದೆ–1978, ಭಾರತೀಯ ನ್ಯಾಯ ಸಂಹಿತೆ ಹಾಗೂ ಮೋಟಾರು ವಾಹನ ಕಾಯ್ದೆ ಸೇರಿದಂತೆ ವಿವಿಧ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಫ್ಐಆರ್ನಲ್ಲಿ ಲಾರಿ ಚಾಲಕ ಸೇರಿದಂತೆ ಒಟ್ಟು ಆರು ಮಂದಿಯನ್ನು ಆರೋಪಿಗಳಾಗಿ ದಾಖಲಿಸಲಾಗಿದೆ. ಲಾರಿ ಚಾಲಕನಾಗಿ ನವೀನ್ ಎಂಬುವವರ ಹೆಸರು ಹಾಗೂ ಲಾರಿಯ ಸಹಾಯಕರು ಮತ್ತು ಮಾಲೀಕರ ಹೆಸರುಗಳನ್ನು ಎಫ್ಐಆರ್ನಲ್ಲಿ ದಾಖಲಿಸಲಾಗಿದೆ.

ಗೋಶಾಲೆಗೆ 25 ಗೋವುಗಳ ಸ್ಥಳಾಂತರ
ಪೊಲೀಸರ ವಶಕ್ಕೆ ಪಡೆದ ಬಳಿಕ ಲಾರಿಯಲ್ಲಿದ್ದ 25 ಗೋವುಗಳನ್ನು ಸಿಂಧನೂರು ನಗರದ ರಾಯಚೂರು ಮುಖ್ಯ ರಸ್ತೆಯಲ್ಲಿರುವ ಜೈನ್ ವರ್ಧಮಾನ್ ಗೋಶಾಲೆಗೆ ಸ್ಥಳಾಂತರಿಸಲಾಗಿದೆ. ಸಿಂಧನೂರು ನಗರ ಪೊಲೀಸ್ ಠಾಣೆಯ ಪಿಐ ವೀರಾರೆಡ್ಡಿ ಅವರ ಸಮ್ಮುಖದಲ್ಲಿ ಗೋವುಗಳನ್ನು ಗೋಶಾಲೆಗೆ ಬಿಡಲಾಗಿದೆ ಎಂದು ತಿಳಿದುಬಂದಿದೆ. ಗೋವುಗಳನ್ನು ಯಾವ ಉದ್ದೇಶಕ್ಕಾಗಿ ಹಾಗೂ ಅಗತ್ಯ ದಾಖಲೆಗಳು ಮತ್ತು ನಿಯಮಗಳನ್ನು ಪಾಲಿಸಲಾಗಿತ್ತೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ, ಅದರ ಚಾಲಕ, ಸಹಾಯಕರು ಹಾಗೂ ಮಾಲೀಕರ ವಿರುದ್ಧ ದಾಖಲಾಗಿರುವ ಆರೋಪಗಳ ಕುರಿತು ತನಿಖೆ ನಡೆಸಲಾಗುತ್ತಿದ್ದು, ತನಿಖೆಯ ನಂತರ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.
— ಬಡವರ ಬಾರಕೋಲು ನ್ಯೂಸ್, ಸಿಂಧನೂರು













