ಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್ಗಳ ವೇಟಿಂಗ್ ರೂಮೋ? – ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿಗಳ ಆಕ್ರೋಶ! ಬೆಳಗ್ಗೆಯಿಂದ ಸಂಜೆವರೆಗೂ ವೈದ್ಯರಿಗಾಗಿ ಕಾದ ರೋಗಿಗಳು – ವಯೋವೃದ್ಧರು, ಗರ್ಭಿಣಿಯರ ಪರದಾಟ; "ಸರ್ಕಾರಿ ಸಂಬಳ ಪಡೆದು ಖಾಸಗಿ ಕ್ಲಿನಿಕ್ನಲ್ಲಿ ಸೇವೆ?" ಎಂಬ ಸಾರ್ವಜನಿಕರ ಪ್ರಶ್ನೆ.

ಸಿಂಧನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕರ್ತವ್ಯ ನಿರ್ವಹಣೆ ಕುರಿತು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆಯೇ ಆಸ್ಪತ್ರೆಗೆ ಬಂದ ರೋಗಿಗಳಿಗೆ ಮೊದಲು ಶುಗರ್ ಹಾಗೂ ಬಿಪಿ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ಸೂಚಿಸಲಾಗುತ್ತದೆ. ಪರೀಕ್ಷೆ ಮುಗಿಸಿ ಬಂದರೂ ವೈದ್ಯರು ಕರ್ತವ್ಯ ಸ್ಥಳದಲ್ಲೇ ಇಲ್ಲದೆ, ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ರೋಗಿಗಳು ಆರೋಪಿಸಿದ್ದಾರೆ.
ಆಸ್ಪತ್ರೆಯಲ್ಲಿ ವಯೋವೃದ್ಧರು, ಗರ್ಭಿಣಿಯರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ವೈದ್ಯರಿಗಾಗಿ ಕಾಯುತ್ತಿರುವ ದೃಶ್ಯಗಳು ಕಂಡುಬಂದಿವೆ. ವೈದ್ಯರು ಎಲ್ಲಿಗೆ ಹೋಗಿದ್ದಾರೆ ಎಂಬ ಮಾಹಿತಿ ಸಿಬ್ಬಂದಿಗಳಿಗೂ ಇಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರು ಸಾರ್ವಜನಿಕರು, "ಸರ್ಕಾರಿ ಆಸ್ಪತ್ರೆಯ ವೈದ್ಯರು ತಮ್ಮ ಖಾಸಗಿ ಕ್ಲಿನಿಕ್ಗಳಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಅದಕ್ಕಾಗಿಯೇ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸಿಗುವುದು ಅಪರೂಪವಾಗಿದೆ" ಎಂದು ಆರೋಪಿಸಿದ್ದಾರೆ.

ಮತ್ತೊಬ್ಬರು, "ಸಿಂಧನೂರು ನೀರಾವರಿ ಪ್ರದೇಶವಾಗಿರುವುದರಿಂದ ಹೆಚ್ಚಿನವರು ಖಾಸಗಿ ಆಸ್ಪತ್ರೆಗಳನ್ನೇ ಆಶ್ರಯಿಸುತ್ತಾರೆ. ಹೀಗಾಗಿ ಸರ್ಕಾರಿ ಆಸ್ಪತ್ರೆಯ ಸೇವೆಗಳ ಬಗ್ಗೆ ಅಧಿಕಾರಿಗಳು ಮತ್ತು ವೈದ್ಯರು ಗಂಭೀರವಾಗಿ ಪರಿಗಣಿಸುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು, "ವೈದ್ಯರು ಇಲ್ಲದ ವೇಳೆ ಸಿಬ್ಬಂದಿಯೇ ವೈದ್ಯರಂತೆ ಚಿಕಿತ್ಸೆ ನೀಡಲು ಮುಂದಾಗುತ್ತಾರೆ. ಚಿಕಿತ್ಸೆ ವೇಳೆ ಏನಾದರೂ ಅನಾಹುತ ಸಂಭವಿಸಿದರೆ ಅದರ ಹೊಣೆ ಯಾರು?" ಎಂದು ಪ್ರಶ್ನಿಸಿದ್ದಾರೆ.
"ವೈದ್ಯರನ್ನು ಹುಡುಕುತ್ತ ರೋಗಿಗಳು ಆಸ್ಪತ್ರೆ ಸುತ್ತಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕರ್ತವ್ಯದ ವೇಳೆಯಲ್ಲೇ ಕೆಲ ವೈದ್ಯರು ಹಾಗೂ ಸಿಬ್ಬಂದಿ ನಂದಿನಿ ಕ್ಯಾಂಟೀನ್ ಬಳಿ ಟೀ ಕುಡಿಯುವುದು, ಸಿಗರೇಟ್ ಸೇದುತ್ತಿರುವುದರಲ್ಲಿ ನಿರತರಾಗಿರುತ್ತಾರೆ" ಎಂದು ಸಾರ್ವಜನಿಕರು ಆರೋಪಿಸಿದ್ದು, ಇಂತಹ ನಿರ್ಲಕ್ಷ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಆಸ್ಪತ್ರೆಗೆ ಬಂದಿದ್ದ ಹಿರಿಯ ನಾಗರಿಕರೊಬ್ಬರು, "ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ತಿಳಿಸಿದರೂ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಸರ್ಕಾರಿ ಸಂಬಳ ಪಡೆದು ಖಾಸಗಿ ಕ್ಲಿನಿಕ್ ನಡೆಸುವವರ ವಿರುದ್ಧ ಸಾರ್ವಜನಿಕರೇ ಸಂಘಟಿತರಾಗಿ ಹೋರಾಟ ನಡೆಸುವ ಸಮಯ ಬಂದಿದೆ. ನಾಲ್ಕು ದಿನ ಕಾದು ನೋಡೋಣ, ಬದಲಾವಣೆ ಆಗದಿದ್ದರೆ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸೋಣ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಪ್ರಶ್ನೆಗಳು:
❓ ಕರ್ತವ್ಯದ ವೇಳೆಯಲ್ಲಿ ವೈದ್ಯರು ಎಲ್ಲಿದ್ದರು?
❓ ರೋಗಿಗಳನ್ನು ಗಂಟೆಗಟ್ಟಲೆ ಕಾಯಿಸುವುದಕ್ಕೆ ಹೊಣೆ ಯಾರು?
❓ ವೈದ್ಯರು ಇಲ್ಲದಾಗ ಸಿಬ್ಬಂದಿ ಚಿಕಿತ್ಸೆ ನೀಡುವುದು ನಿಯಮಬದ್ಧವೇ?
❓ ಆರೋಗ್ಯ ಇಲಾಖೆ ಹಾಗೂ ಜನಪ್ರತಿನಿಧಿಗಳು ಈ ಕುರಿತು ಕ್ರಮ ಕೈಗೊಳ್ಳುವರೇ?
❓ ಕರ್ತವ್ಯದ ಸಮಯದಲ್ಲಿ ರೋಗಿಗಳನ್ನು ಬಿಟ್ಟು ಟೀ ಕುಡಿಯುತ್ತ ಸಿಗರೇಟ್ ಹೊಡೆಯುವುದು ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲವೇ..?













