ಹೆರಿಗೆಗಳ ಲೆಕ್ಕ ಹೆಚ್ಚುತ್ತಿದೆ, ಶಿಶುಗಳ ಸಾವು ನಿಲ್ಲುತ್ತಿಲ್ಲ: ಆರೋಗ್ಯ ವ್ಯವಸ್ಥೆಯ ವೈಫಲ್ಯಕ್ಕೆ ಯಾರು ಹೊಣೆ? ರೆಫರಲ್ ಕೇಂದ್ರಗಳಾಗುತ್ತಿರುವ MCH ಆಸ್ಪತ್ರೆಗಳು; ಶಿಶು ಮರಣಗಳ ಕುರಿತು ಸಮಗ್ರ ತನಿಖೆಗೆ ಸಾರ್ವಜನಿಕರ ಆಗ್ರಹ
ಸಿಂಧನೂರು, ಜೂನ್ 7: ಭಾರತದಲ್ಲಿ ಸಾಂಸ್ಥಿಕ ಹೆರಿಗೆಗಳ ಪ್ರಮಾಣ ಶೇ.90ಕ್ಕಿಂತ ಹೆಚ್ಚಾಗಿದ್ದರೂ ನವಜಾತ ಶಿಶುಗಳ ಸಾವಿನ ಪ್ರಮಾಣದಲ್ಲಿ ನಿರೀಕ್ಷಿತ ಇಳಿಕೆ ಕಂಡುಬರದಿರುವುದು ಆರೋಗ್ಯ ಕ್ಷೇತ್ರದ ಗಂಭೀರ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಮಕ್ಕಳ ತಜ್ಞ ಡಾ. ಶಿವರಾಜ್ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ವರದಿಯ ಪ್ರಕಾರ ದೇಶದಲ್ಲಿ ಬಹುತೇಕ ಹೆರಿಗೆಗಳು ಆಸ್ಪತ್ರೆಗಳಲ್ಲೇ ನಡೆಯುತ್ತಿವೆ. ಆದರೆ ಆಸ್ಪತ್ರೆಗಳ ಸಂಖ್ಯೆ, ಕಟ್ಟಡಗಳು ಹಾಗೂ ಆಧುನಿಕ ವೈದ್ಯಕೀಯ ಸೌಲಭ್ಯಗಳು ಹೆಚ್ಚಾದರೂ ನವಜಾತ ಶಿಶುಗಳ ಸಾವಿನ ಪ್ರಮಾಣ ಮಾತ್ರ ಕಡಿಮೆಯಾಗದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ರಾಜ್ಯದ ಬಹುತೇಕ ತಾಲೂಕು ಕೇಂದ್ರಗಳಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ (MCH) ಆಸ್ಪತ್ರೆಗಳಿಗಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಅತ್ಯಾಧುನಿಕ ಕಟ್ಟಡಗಳು ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಆದರೆ ಅನೇಕ ಕಡೆಗಳಲ್ಲಿ ಈ ಆಸ್ಪತ್ರೆಗಳು ಕೇವಲ ರೋಗಿಗಳನ್ನು ಜಿಲ್ಲಾ ಆಸ್ಪತ್ರೆ ಅಥವಾ ವೈದ್ಯಕೀಯ ಕಾಲೇಜುಗಳಿಗೆ ರೆಫರ್ ಮಾಡುವ ಕೇಂದ್ರಗಳಾಗಿ ಮಾರ್ಪಟ್ಟಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಪ್ರತಿ ಬಾರಿ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಅಥವಾ ಜಿಲ್ಲಾ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳ ಸಾವು ಸಂಭವಿಸಿದಾಗ “ತಡವಾಗಿ ಬಂದ ಪ್ರಕರಣ”, “ಅಕಾಲಿಕ ಜನನ”, “ಕಡಿಮೆ ತೂಕದ ಮಗು” ಎಂಬ ಕಾರಣಗಳನ್ನು ಮುಂದಿಡಲಾಗುತ್ತದೆ. ಆದರೆ ಈ ಕಾರಣಗಳು ಆರೋಗ್ಯ ವ್ಯವಸ್ಥೆಯ ಲೋಪಗಳನ್ನು ಮುಚ್ಚಿಹಾಕಲು ಬಳಸುವ ನೆಪಗಳಾಗಬಾರದು ಎಂದು ಡಾ. ಶಿವರಾಜ್ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಕೇವಲ 15 ತಿಂಗಳಲ್ಲಿ 551 ಶಿಶುಗಳ ಸಾವು, ಕೊಪ್ಪಳ ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ 1,253 ಶಿಶುಗಳ ಮರಣ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿವರ್ಷ ಸರಾಸರಿ 2,250 ಶಿಶುಗಳ ಸಾವು ವರದಿಯಾಗಿರುವುದು ಆರೋಗ್ಯ ವ್ಯವಸ್ಥೆಯ ಗಂಭೀರ ವೈಫಲ್ಯವನ್ನು ಸೂಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಮಾಧ್ಯಮದ ಕಳಕಳಿ: ತನಿಖೆ ಮಾತ್ರವಲ್ಲ, ಕ್ರಮವೂ ಆಗಬೇಕು
ನವಜಾತ ಶಿಶುಗಳ ಮರಣ, ವೈದ್ಯರ ನಿರ್ಲಕ್ಷ್ಯ ಹಾಗೂ ಆಸ್ಪತ್ರೆಗಳ ಅವ್ಯವಸ್ಥೆಗಳ ಕುರಿತು ಹಲವು ಬಾರಿ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದರೂ, ಹೆಚ್ಚಿನ ಸಂದರ್ಭಗಳಲ್ಲಿ ತನಿಖೆಯ ಹೆಸರಿನಲ್ಲಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ವರದಿ ಸಂಗ್ರಹಿಸುವುದನ್ನು ಬಿಟ್ಟರೆ ಕಠಿಣ ಕ್ರಮ ಜರುಗಿಸಿರುವ ಉದಾಹರಣೆಗಳು ವಿರಳವಾಗಿವೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಶಿಶುಗಳ ಸಾವುಗಳು ಕೇವಲ ಅಂಕಿಅಂಶಗಳಲ್ಲ; ಅವು ಕುಟುಂಬಗಳ ಕನಸುಗಳ ಅಂತ್ಯ. ಆದ್ದರಿಂದ ನಿರ್ಲಕ್ಷ್ಯ ಸಾಬೀತಾದರೆ ಸಂಬಂಧಪಟ್ಟ ವೈದ್ಯರು, ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ಮೂಲಕ ವ್ಯವಸ್ಥೆಯಲ್ಲಿ ಹೊಣೆಗಾರಿಕೆಯ ಭಾವನೆ ಮೂಡಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಆರೋಗ್ಯ ಸಚಿವರ ಖಡಕ್ ಸಂದೇಶ
ಈ ನಡುವೆ ನೂತನ ಆರೋಗ್ಯ ಸಚಿವರಾದ ಯು.ಟಿ. ಖಾದರ್ ಅವರು ಅಧಿಕಾರ ಸ್ವೀಕರಿಸಿದ ಬಳಿಕ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ವೈದ್ಯರು ಹಾಗೂ ಸಿಬ್ಬಂದಿಗೆ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರದಂತೆ ಎಚ್ಚರಿಕೆ ನೀಡಿರುವುದು ಗಮನ ಸೆಳೆದಿದೆ. ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿದರೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟ ಸಂದೇಶ ನೀಡಿರುವುದನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ.

ರಾಯಚೂರು ಜಿಲ್ಲೆಗೆ ವಿಶೇಷ ಗಮನ ನೀಡುವಂತೆ ಒತ್ತಾಯ
ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ಕುಂದುಕೊರತೆಗಳನ್ನು ಪರಿಶೀಲಿಸುವ ಜೊತೆಗೆ, ವಿಶೇಷವಾಗಿ ರಾಯಚೂರು ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ವರದಿಯಾಗುತ್ತಿರುವ ನವಜಾತ ಶಿಶುಗಳ ಸಾವಿನ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂಬ ಆಗ್ರಹ ಕೇಳಿಬಂದಿದೆ. ನಿರ್ಲಕ್ಷ್ಯ ಎಸಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ

ಸ್ವತಂತ್ರ ತನಿಖೆಗೆ ಒತ್ತಾಯ
ನವಜಾತ ಶಿಶುಗಳ ಸಾವಿಗೆ ಕಾರಣವಾಗುತ್ತಿರುವ ಅಂಶಗಳ ಬಗ್ಗೆ ಸ್ವತಂತ್ರ ಮತ್ತು ಪಾರದರ್ಶಕ ತನಿಖೆ ನಡೆಯಬೇಕು. ವೈದ್ಯಕೀಯ ಕಾಲೇಜುಗಳು ತಾಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ನಿರಂತರ ತರಬೇತಿ ಮತ್ತು ತಾಂತ್ರಿಕ ಮಾರ್ಗದರ್ಶನ ನೀಡಬೇಕು. ಅನಗತ್ಯ ರೆಫರಲ್ಗಳನ್ನು ತಡೆಯಲು ಜವಾಬ್ದಾರಿಯುತ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಡಾ. ಶಿವರಾಜ್ ಪಾಟೀಲ ಒತ್ತಾಯಿಸಿದ್ದಾರೆ. ಆರೋಗ್ಯ ವ್ಯವಸ್ಥೆಯ ಯಶಸ್ಸು ಎಷ್ಟು ಹೆರಿಗೆಗಳನ್ನು ಮಾಡಿಸಲಾಗಿದೆ ಎಂಬುದರಿಂದ ಅಲ್ಲ, ಎಷ್ಟು ನವಜಾತ ಶಿಶುಗಳ ಜೀವ ಉಳಿಸಲಾಗಿದೆ ಎಂಬುದರಿಂದ ಅಳೆಯಬೇಕು. ಸಾರ್ವಜನಿಕರು ನಂಬಿ ಬರುವ ಆಸ್ಪತ್ರೆಗಳು ಕೇವಲ ರೆಫರಲ್ ಕೇಂದ್ರಗಳಾಗದೆ ಜೀವ ಉಳಿಸುವ ಕೇಂದ್ರಗಳಾಗಬೇಕು. ಇಲ್ಲವಾದರೆ ಆರೋಗ್ಯ ಕ್ಷೇತ್ರಕ್ಕೆ ಖರ್ಚಾಗುತ್ತಿರುವ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣಕ್ಕೆ ಅರ್ಥವೇ ಇಲ್ಲದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
– ವಿಶೇಷ ವರದಿ ಬಡವರ ಬಾರಕೋಲು












