ಫೆಬ್ರುವರಿ 9.ಕರ್ನಾಟಕ ಸರ್ಕಾರವು ನಗರ ಬಡವರು, ದಿನಗೂಲಿ ಕಾರ್ಮಿಕರು ಹಾಗೂ ಕೊಳಗೇರಿ ನಿವಾಸಿಗಳಿಗೆ ಉಚಿತ, ಗುಣಮಟ್ಟದ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಆರಂಭಿಸಿದ ‘ನಮ್ಮ ಕ್ಲಿನಿಕ್’ ಯೋಜನೆ ಇಂದು ಹಲವೆಡೆ ಜನರಿಗೆ ಆಸರೆಯಾಗುತ್ತಿದೆ. 10ರಿಂದ 20 ಸಾವಿರ ಜನರಿಗೆ ಒಂದರಂತೆ ಸ್ಥಾಪಿಸಿರುವ ಈ ಕ್ಲಿನಿಕ್ಗಳಲ್ಲಿ ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9ರಿಂದ ಸಂಜೆ 4:30ರವರೆಗೆ (ಕೆಲವೆಡೆ ರಾತ್ರಿ 8ರವರೆಗೆ) ಸೇವೆ ನೀಡಬೇಕಾಗಿದೆ.
ಗರ್ಭಿಣಿಯರ ತಪಾಸಣೆ, ಲಸಿಕೆ, ಕುಟುಂಬ ಕಲ್ಯಾಣ, ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ರೋಗಗಳ ನಿರ್ವಹಣೆ, ಮಧುಮೇಹ–ರಕ್ತದೊತ್ತಡ ತಪಾಸಣೆ, 14 ಬಗೆಯ ಲ್ಯಾಬ್ ಪರೀಕ್ಷೆಗಳು ಹಾಗೂ ಉಚಿತ ಔಷಧಿ ವಿತರಣೆ ಸೇರಿದಂತೆ ಒಟ್ಟು 12 ಬಗೆಯ ಸೇವೆಗಳು ಇಲ್ಲಿ ಲಭ್ಯವಿರಬೇಕು ಎಂಬುದು ಸರ್ಕಾರದ ಸ್ಪಷ್ಟ ಆದೇಶ.
ಆದರೆ ಈ ಮಹತ್ವಾಕಾಂಕ್ಷಿ ಯೋಜನೆಯ ಉದ್ದೇಶಕ್ಕೆ ರಾಯಚೂರು ಜಿಲ್ಲೆಯ ಸಿಂಧನೂರು ನಗರ ವ್ಯಾಪ್ತಿಯ ಮೈಬೂಬ್ ಕಾಲೋನಿಯ ನಮ್ಮ ಕ್ಲಿನಿಕ್ನಲ್ಲಿ ನಡೆಯುತ್ತಿರುವ ಆಡಳಿತ ನಿರ್ಲಕ್ಷ್ಯ ಮಸಿ ಬಳಿಯುತ್ತಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಸಾಂದರ್ಭಿಕ ಚಿತ್ರ
https://youtube.com/shorts/67uOrDvbw6I?si=LsZzqD186DCaF3lU
ಬೆಳಿಗ್ಗೆ 10:40 ಆದರೂ ವೈದ್ಯರಿಲ್ಲ!
ಶನಿವಾರ ಬೆಳಿಗ್ಗೆ 10 ಗಂಟೆ 40 ನಿಮಿಷವಾದರೂ ಕ್ಲಿನಿಕ್ನಲ್ಲಿ ವೈದ್ಯಾಧಿಕಾರಿಗಳು ಹಾಜರಾಗಿರಲಿಲ್ಲ. ಚಿಕಿತ್ಸೆಗಾಗಿ ಬೆಳಗ್ಗೆಯೇ ಬಂದಿದ್ದ ರೋಗಿಗಳು ಮತ್ತು ಸಾರ್ವಜನಿಕರು ನಿರೀಕ್ಷೆಯಲ್ಲಿ ನಿಂತು ಕಾದು ಕಾದು ಬೇಸತ್ತು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಸಂಬಂಧಿಸಿದಂತೆ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಅಯ್ಯನಗೌಡ ಅವರನ್ನು ಸಂಪರ್ಕಿಸಿ “ನಿಗದಿತ ಸಮಯವಾದರೂ ವೈದ್ಯರು ಯಾಕೆ ಬಂದಿಲ್ಲ?” ಎಂದು ಪ್ರಶ್ನಿಸಿದಾಗ, ಅವರು “ವೈದ್ಯರಿಗೆ ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 8ರವರೆಗೆ ಸಮಯ ಇರುತ್ತದೆ” ಎಂದು ಉತ್ತರ ನೀಡಿದ್ದಾರೆ ಎನ್ನಲಾಗಿದೆ.
ಆದರೆ ಕ್ಲಿನಿಕ್ ಮುಂದೆ ಅಂಟಿಸಿರುವ ಸಮಯದ ನಾಮಫಲಕದಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 1:30 ಮತ್ತು ಮಧ್ಯಾಹ್ನ 2ರಿಂದ ಸಂಜೆ 4:30ರವರೆಗೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ವಿಷಯವನ್ನು ಗಮನಕ್ಕೆ ತಂದಾಗ, “ಅದು ಸೀಸನ್ ಪ್ರಕಾರ ಬದಲಾಗುತ್ತದೆ, ಈಗ ಸಮಯ ಬದಲಾಗಿರಬಹುದು” ಎನ್ನುವ ಗೊಂದಲಕಾರಿ ಉತ್ತರವನ್ನು ನೀಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಒಂದು ಮಾತಿಗೆ ಒಂದು ಉತ್ತರ – ಗೊಂದಲದ ಮೇಲೆ ಗೊಂದಲ
ಮೊದಲು “ಲ್ಯಾಬ್ ಟೆಕ್ನಿಷಿಯನ್ ಹಾಗೂ ಡಿ-ಗ್ರೂಪ್ ಸಿಬ್ಬಂದಿ ಇಲ್ಲ” ಎಂದ ಅಧಿಕಾರಿಗಳು, ಬಳಿಕ “ವೈದ್ಯರನ್ನು ತಾಯಿ–ಮಕ್ಕಳ ಆಸ್ಪತ್ರೆಗೆ ಕಳಿಸಲಾಗಿದೆ” ಎಂದು ಹೇಳಿರುವುದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.
ಆದರೆ ಸ್ಥಳದಲ್ಲೇ ಶುಶ್ರೂಷಕರು ಮತ್ತು ಡಿ-ಗ್ರೂಪ್ ಸಿಬ್ಬಂದಿ ಇದ್ದರೂ ವೈದ್ಯರು ಮಾತ್ರ ಗೈರು ಎಂಬುದು ಬಹಿರಂಗವಾದ ನಂತರ, “ಇಷ್ಟೊತ್ತಿಗೆ ಕ್ಲಿನಿಕ್ ತೆಗೆಯಬೇಕಿತ್ತು, ನಾನು ಮಾತನಾಡುತ್ತೇನೆ” ಎಂದು ತಡಬಡಾಯಿಸಿದ ಉತ್ತರ ನೀಡಿದ್ದಾರೆ ಎನ್ನಲಾಗಿದೆ.
ಇಷ್ಟಾದರೂ ಸಹ “ಇಲ್ಲಿನ ವೈದ್ಯರು ತುಂಬಾ ಸಿಂಸಿಯರ್ ಇದ್ದಾರೆ, ನೀವು ಅಲ್ಲೇ ಕಾಯಿರಿ, ಇನ್ನೂ ಹತ್ತು ನಿಮಿಷದಲ್ಲಿ ಬರುತ್ತಾರೆ” ಎಂಬ ಭರವಸೆ ಮಾತ್ರ ಸಿಕ್ಕಿದ್ದು, ವೈದ್ಯರು ಸಮಯಕ್ಕೆ ಬಾರದಿರುವುದು ಸಾರ್ವಜನಿಕರ ಸಹನಶೀಲತೆಯನ್ನು ಮೀರಿಸಿದೆ.
‘ಹೇಳೋರಿಲ್ಲ, ಕೇಳೋರಿಲ್ಲ’ – ಸಾರ್ವಜನಿಕರ ಆಕ್ರೋಶ
“ನಾವು ಏನು ಪ್ರಶ್ನೆ ಮಾಡ್ತೀವೋ, ಅವರು ಏನು ಉತ್ತರ ಕೊಡ್ತಾರೋ ನಮಗೆ ದಿಕ್ಕೇ ತೋಚಲ್ಲ. ಇಲ್ಲಿಗೆ ಹೇಳೋರಿಲ್ಲ, ಕೇಳೋರಿಲ್ಲ” ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://www.instagram.com/reel/DUI6Cs1ksLJ/?igsh=MThjaXgwd3FqNXRoOA==
ಸರ್ಕಾರದ ಉದ್ದೇಶ ಬಡವರಿಗೆ ಸ್ಥಳೀಯವಾಗಿ ಚಿಕಿತ್ಸೆ ನೀಡುವುದು, ಸರ್ಕಾರಿ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡುವುದು. ಆದರೆ ಇಂತಹ ನಿರ್ಲಕ್ಷ್ಯದಿಂದಾಗಿ ಬಡ ಜನರೇ ಮತ್ತೆ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂಬುದು ಸಾರ್ವಜನಿಕರ ಅಳಲು.
ಜಿಲ್ಲಾ ಆರೋಗ್ಯಾಧಿಕಾರಿ ಎಚ್ಚೆತ್ತುಕೊಳ್ಳಬೇಕಾದ ಸಮಯ
ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿಗಳಾದ (DHO) ಡಾ. ಸುರೇಂದ್ರಬಾಬು ಅವರು ತಕ್ಷಣ ಎಚ್ಚೆತ್ತುಕೊಂಡು, ಸಿಂಧನೂರು ಮೈಬೂಬ್ ಕಾಲೋನಿಯ ನಮ್ಮ ಕ್ಲಿನಿಕ್ನಲ್ಲಿ ನಡೆಯುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕು.
ಸಮಯ ಪಾಲನೆ ಮಾಡದ, ಜವಾಬ್ದಾರಿ ತಪ್ಪುತ್ತಿರುವ ಆಡಳಿತ ವೈದ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಏಕಮತದ ಬೇಡಿಕೆಯಾಗಿದೆ.‘ನಮ್ಮ ಕ್ಲಿನಿಕ್’ ಎಂಬುದು ಕಾಗದದಲ್ಲಷ್ಟೇ ಉಳಿಯದೇ, ನೆಲಮಟ್ಟದಲ್ಲಿ ಜನರಿಗೆ ನಿಜವಾದ ನೆರವಾಗಬೇಕಾದರೆ, ಇಂತಹ ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕುವುದು ಅತ್ಯಾವಶ್ಯಕವಾಗಿದೆ.
ಸಂಘಟನೆಯ ಅಧ್ಯಕ್ಷ ಮಂಜುನಾಥ್ ಗಾಣಿಗೇರ್ ಅವರ ಹೇಳಿಕೆ

“ಕಳೆದ ನಾಲ್ಕು–ಐದು ದಿನಗಳಿಂದ ನಾನು ಸ್ವತಃ ಗಮನಿಸುತ್ತಿದ್ದೇನೆ. ಸಿಂಧನೂರು ನಗರದ ಮೈಬೂಬ್ ಕಾಲೋನಿಯಲ್ಲಿರುವ ನಮ್ಮ ಕ್ಲಿನಿಕ್ಗೆ ಸಮಯಕ್ಕೆ ವೈದ್ಯರು ಬರುತ್ತಿಲ್ಲ, ಯಾವುದೇ ಸಿಬ್ಬಂದಿಯೂ ಸರಿಯಾಗಿ ಹಾಜರಾಗುತ್ತಿಲ್ಲ. ಕ್ಲಿನಿಕ್ ಬಾಗಿಲು ತೆರೆಯಬೇಕಾದ ಸಮಯಕ್ಕೆ ಬೀಗ ಹಾಕಿದಂತೆಯೇ ಇರುತ್ತದೆ.
ಇಂತಹ ಸ್ಥಿತಿಯಲ್ಲಿ ಬಡವರು, ದಿನಗೂಲಿ ಕಾರ್ಮಿಕರು, ವೃದ್ಧರು, ಮಹಿಳೆಯರು ಮತ್ತು ಮಕ್ಕಳಿಗೆ ಚಿಕಿತ್ಸೆ ಸೇವೆ ಹೇಗೆ ಸಿಗಬೇಕು? ಸರ್ಕಾರ ಬಡವರ ಆರೋಗ್ಯಕ್ಕಾಗಿ ಇಷ್ಟು ದೊಡ್ಡ ಯೋಜನೆ ರೂಪಿಸಿದೆ. ಆದರೆ ನೆಲಮಟ್ಟದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಆ ಯೋಜನೆ ಅರ್ಥಹೀನವಾಗುತ್ತಿದೆ.
ಸಮಯದ ನಾಮಫಲಕ ಒಂದು, ಅಧಿಕಾರಿಗಳ ಮಾತು ಮತ್ತೊಂದು. ಕೇಳಿದರೆ ಒಂದೊಂದು ಉತ್ತರ ಕೊಡುತ್ತಾರೆ. ಇದು ಜನರ ಆರೋಗ್ಯದ ವಿಷಯದಲ್ಲಿ ನಡೆಯುತ್ತಿರುವ ಗಂಭೀರ ಅಕ್ರಮ ಮತ್ತು ನಿರ್ಲಕ್ಷ್ಯ. ಇಂತಹ ಧೋರಣೆ ಯಾವ ರೀತಿಯಲ್ಲೂ ಸರಿ ಅಲ್ಲ.
ಸರ್ಕಾರದಿಂದ ಬಡವರಿಗಾಗಿ ನೀಡಲಾಗುತ್ತಿರುವ ಉಚಿತ ಆರೋಗ್ಯ ಸೇವೆಗಳು ಸರಿಯಾದ ಸಮಯಕ್ಕೆ, ಸರಿಯಾದ ರೀತಿಯಲ್ಲಿ ಜನರಿಗೆ ತಲುಪಲೇಬೇಕು. ಇದರಲ್ಲಿ ನಿರ್ಲಕ್ಷ್ಯ ತೋರಿಸುವ ಆಡಳಿತ ವೈದ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿಯ ಮೇಲೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು.
ಒಂದು ವೇಳೆ ಸಂಬಂಧಪಟ್ಟ ಮೇಲಾಧಿಕಾರಿಗಳು ಇನ್ನೂ ಎಚ್ಚೆತ್ತುಕೊಳ್ಳದೇ ಇದ್ದರೆ, ಮುಂದಿನ ದಿನಗಳಲ್ಲಿ ಸಾರ್ವಜನಿಕರ ಜೊತೆಗೂಡಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಜನರ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ ಸರಿಯಲ್ಲ ಎಂದು ಹೇಳಿದ್ದಾರೆ.













