ಡಿಪೋ ಮ್ಯಾನೇಜರ್ ಕುರ್ಚಿಗೆ ಮಾತ್ರ, ಜವಾಬ್ದಾರಿ ಗಾಳಿಗೆ?
ಕಚೇರಿಯಲ್ಲಿ ನಿದ್ದೆ, ರಸ್ತೆಯಲ್ಲಿ ಗೊಂದಲ – KKRTC ಸ್ಟೈಲ್
ಬಸ್ಸು ಇಲ್ಲದರೂ ಟಿಕೆಟ್ ಇದೆ, ಟಿಕೆಟ್ ಇದ್ದರೂ ಬಸ್ಸು ಇಲ್ಲ – ವಾವ್ ವ್ಯವಸ್ಥೆ!

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಎಡವಟ್ಟು: ಕೇಳುವವರಿಲ್ಲ, ಹೇಳುವವರಿಲ್ಲ!
ಪ್ರಯಾಣಿಕನ ಬ್ಯಾಗ್ ನಾಪತ್ತೆ ಪ್ರಕರಣದಲ್ಲಿ ವ್ಯವಸ್ಥೆಯ ಅಸಡ್ಡೆ ಬಯಲು
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಬಳ್ಳಾರಿ ವಿಭಾಗದ ಶಿರಗುಪ್ಪ ಘಟಕದ ಬಸ್ಗಳಲ್ಲಿ ನಡೆಯುತ್ತಿರುವ ಅಸಡ್ಡೆ ಮತ್ತು ನಿರ್ಲಕ್ಷ್ಯ ಮತ್ತೊಮ್ಮೆ ಬಹಿರಂಗವಾಗಿದೆ. ಪ್ರಯಾಣಿಕರ ಭದ್ರತೆ, ವಸ್ತು ಸಂರಕ್ಷಣೆ ಹಾಗೂ ದಾಖಲೆಗಳ ನಿರ್ವಹಣೆಯಲ್ಲಿ ನಿಗಮ ಸಂಪೂರ್ಣ ವಿಫಲವಾಗಿರುವುದನ್ನು ಈ ಘಟನೆ ತೋರಿಸುತ್ತದೆ.
ದಿನಾಂಕ 08 ಫೆಬ್ರವರಿ 2026ರಂದು ಒಬ್ಬ ಪ್ರಯಾಣಿಕನು ಸಿಂಧನೂರಿನಿಂದ ಮಸ್ಕಿಗೆ ಬಳ್ಳಾರಿ ವಿಭಾಗದ ಶಿರಗುಪ್ಪ ಘಟಕದ ಬಸ್ನಲ್ಲಿ ಪ್ರಯಾಣಿಸಿದ್ದಾನೆ. ಪ್ರಯಾಣ ಮುಗಿದ ಬಳಿಕ ತನ್ನ ಬ್ಯಾಗ್ ಅನ್ನು ಬಸ್ಸಿನಲ್ಲಿ ಮರೆತುಬಿಟ್ಟಿದ್ದಾನೆ. ಕಳೆದುಕೊಂಡ ಬ್ಯಾಗ್ ಹುಡುಕಲು ಪ್ರಯಾಣಿಕನು ಮಸ್ಕಿ ಬಸ್ ನಿಲ್ದಾಣದಲ್ಲಿ ವಿಚಾರಿಸಿದಾಗ,
“ಈ ವಾಹನ ಇಲ್ಲಿ ಬಂದೇ ಇಲ್ಲ, ನಮ್ಮ ದಾಖಲೆಯಲ್ಲಿ ಎಂಟ್ರಿ ಇಲ್ಲ. ಯಾರನ್ನಾದರೂ ಕೇಳಿ ನೋಡಿ” ಎಂಬ ಜವಾಬ್ದಾರಿಯಿಲ್ಲದ ಉತ್ತರ ನೀಡಲಾಗಿದೆ.
ನಂತರ ಈ ವಿಷಯವನ್ನು ‘ಬಡವರ ಬಾರಕೋಲು’ ಮಾಧ್ಯಮದ ಗಮನಕ್ಕೆ ತರಲಾಗಿದೆ. ನಮ್ಮ ಮಾಧ್ಯಮ ತಂಡವು ಸತ್ಯಾಸತ್ಯತೆ ತಿಳಿಯಲು ಸಿಂಧನೂರು ಬಸ್ ನಿಲ್ದಾಣದಲ್ಲಿ ವಿಚಾರಿಸಿದಾಗ ಅಲ್ಲಿಯೂ ಇದೇ ಉತ್ತರ —
“ಈ ವಾಹನ ಇಲ್ಲಿಗೆ ಬಂದಿಲ್ಲ, ಬಸ್ ಫೋಟೋ ಇದ್ದರೆ ತೋರಿಸಿ, ಇಲ್ಲದಿದ್ದರೆ ಟಿಕೆಟ್ ಕೊಡಿ” ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ.
ಪ್ರಯಾಣಿಕನು ತನ್ನ ಬಳಿ ಇದ್ದ ಟಿಕೆಟ್ ತೋರಿಸಿದ ಬಳಿಕ ಮಾತ್ರ ಅಧಿಕಾರಿಗಳು ಎಚ್ಚೆತ್ತುಕೊಂಡು ಬಳ್ಳಾರಿ ವಿಭಾಗದ ಶಿರಗುಪ್ಪ ಘಟಕಕ್ಕೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಆದರೆ ಅಲ್ಲಿ ಹೊರಬಂದ ಸತ್ಯ ಇನ್ನಷ್ಟು ಆತಂಕಕಾರಿಯಾಗಿತ್ತು.
ಟಿಕೆಟ್ ಒಂದರಲ್ಲೊಂದು, ಬಸ್ ಮತ್ತೊಂದು!
ಪ್ರಯಾಣಿಕನ ಟಿಕೆಟ್ನಲ್ಲಿ ನಮೂದಾಗಿದ್ದ ವಾಹನ ಸಂಖ್ಯೆ 28F 2059 ಆಗಿತ್ತು.
ಆದರೆ ಪ್ರಯಾಣ ನಡೆಸಿದ ಬಸ್ಸಿನ ನಿಜವಾದ ಸಂಖ್ಯೆ KA 35 0535 ಆಗಿತ್ತು.
ಒಂದೇ ಪ್ರಯಾಣಕ್ಕೆ ಟಿಕೆಟ್ನಲ್ಲಿ ಒಂದು ಬಸ್ ಸಂಖ್ಯೆ, ರಸ್ತೆಯಲ್ಲಿ ಓಡಿದ ಬಸ್ ಮತ್ತೊಂದು ಸಂಖ್ಯೆ — ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಅಧಿಕಾರಿಗಳ ಉತ್ತರ ಇನ್ನಷ್ಟು ಶಾಕ್ ನೀಡುವಂತಿತ್ತು.
“ಏನು ಮಾಡಬೇಕು ಸರ್? ಕೆಲವೊಮ್ಮೆ ಬಸ್ಸುಗಳು ಲಭ್ಯವಿಲ್ಲದಾಗ ಬೇರೆ ಬಸ್ಸುಗಳನ್ನು ಕಳುಹಿಸಿ ಟಿಕೆಟ್ ಕೊಡಬೇಕಾದ ಸಂದರ್ಭ ಬರುತ್ತದೆ. ಹೀಗೆ ಆಗ್ತಾ ಇರುತ್ತದೆ, ಏನು ತೊಂದರೆ ಆಗಿದೆ ಇರಲಿ ಬಿಡಿ”
ಎಂದು ಹೇಳಿ ವಿಷಯವನ್ನು ತೇಲಿಸಿ ಬಿಡಲು ಯತ್ನಿಸಿದ್ದಾರೆ.
‘ಪಾಪ ಅವರು ಸಣ್ಣ ಅಧಿಕಾರಿಗಳು’ – ಆದರೆ ಡಿಪೋ ಮ್ಯಾನೇಜರ್ ಯಾಕೆ?
ಈ ಘಟನೆಯಿಂದ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳು ಎದ್ದಿವೆ.
ಸಣ್ಣಪುಟ್ಟ ಅಧಿಕಾರಿಗಳು ಏನು ಮಾಡಲಿ ಎನ್ನಬಹುದು. ಆದರೆ ಹಾಗಾದರೆ ಡಿಪೋ ಇದ್ದು ಪ್ರಯೋಜನವೇನು? ಡಿಪೋ ಮ್ಯಾನೇಜರ್ ಯಾಕೆ? ಮೇಲಧಿಕಾರಿಗಳ ಜವಾಬ್ದಾರಿ ಏನು?
ಬಸ್ ಸಂಖ್ಯೆ, ದಾಖಲೆ, ಪ್ರಯಾಣಿಕರ ವಸ್ತುಗಳು — ಎಲ್ಲವೂ ಗೊಂದಲದ ಗೂಡಾಗಿರುವಾಗ, ಇಂತಹ ವ್ಯವಸ್ಥೆಯಲ್ಲಿ ಪ್ರಯಾಣಿಕರ ಸುರಕ್ಷತೆ ಹೇಗೆ ಸಾಧ್ಯ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಎಚ್ಚರವಾಗುವರೇ ಅಧಿಕಾರಿಗಳು?
ಒಂದು ಬ್ಯಾಗ್ ನಾಪತ್ತೆ ಪ್ರಕರಣದ ಮೂಲಕ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥೆಯಲ್ಲಿರುವ ದೊಡ್ಡ ಮಟ್ಟದ ಅಕ್ರಮ, ಅಸಡ್ಡೆ ಮತ್ತು ನಿರ್ಲಕ್ಷ್ಯ ಬಹಿರಂಗವಾಗಿದೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು,
ದಾಖಲೆಗಳ ಸರಿಯಾದ ನಿರ್ವಹಣೆ,
ಪ್ರಯಾಣಿಕರ ವಸ್ತುಗಳಿಗೆ ಭದ್ರತೆ,
ಮತ್ತು ಜವಾಬ್ದಾರಿಯುತ ಆಡಳಿತ
ನಡೆಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
— ಬಡವರ ಬಾರಕೋಲು ಮಾಧ್ಯಮ













