ಸಿಂಧನೂರು | ಮಾರ್ಚ್ 28
ತಿಪ್ಪೆಗೊಬ್ಬರ (ಜಾನುವಾರುಗಳ ಸಗಣಿ) ತುಂಬಿಕೊಂಡು ಜಮೀನಿಗೆ ತೆರಳುತ್ತಿದ್ದ ಟ್ರಾಕ್ಟರ್ ಪಲ್ಟಿಯಾಗಿ ಕೆರೆಗೆ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಸಿಂಧನೂರು ತಾಲೂಕಿನ 4 ಮೈಲ್ ಕ್ಯಾಂಪ್ ಬಳಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಮೃತರನ್ನು 4 ಮೈಲ್ ಕ್ಯಾಂಪ್ ನಿವಾಸಿ ವಿರುಪನಗೌಡ ಅಯ್ಯನಗೌಡ (50) ಹಾಗೂ ವಿರುಪಾಪೂರು ಗ್ರಾಮದ ನಿವಾಸಿ ಸುಖಮುನಿಯಪ್ಪ ಸಂತೇರ್ (30) ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ತಿಪ್ಪೆಗೊಬ್ಬರವನ್ನು ಟ್ರಾಕ್ಟರ್ನಲ್ಲಿ ತುಂಬಿಕೊಂಡು ಹೊಲಕ್ಕೆ ಸಾಗಿಸುತ್ತಿದ್ದ ವೇಳೆ ಟ್ರಾಕ್ಟರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಮಾರ್ಗ ಮಧ್ಯೆ ಇರುವ ಕೆರೆಗೆ ಮುಗುಚಿ ಬಿದ್ದಿದ್ದು, ಟ್ರಾಕ್ಟರ್ನಲ್ಲಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಘಟನೆ ಸಂಭವಿಸಿದ ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿದರೂ, ಆಗಾಗಲೇ ಇಬ್ಬರೂ ಮೃತಪಟ್ಟಿರುವುದು ತಿಳಿದುಬಂದಿದೆ. ದುರಂತ ಕ್ಷಣಾರ್ಧದಲ್ಲಿ ಸಂಭವಿಸಿರುವುದರಿಂದ ರಕ್ಷಣೆ ಕಾರ್ಯ ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಿಂಧನೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಈ ದುರ್ಘಟನೆ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಮೃತರ ಕುಟುಂಬಗಳಿಗೆ ಆಘಾತ ಉಂಟಾಗಿದೆ.













