BB NEWS kannada
📍ಬೆಂಗಳೂರು | ಮಾರ್ಚ್ 29
ಅಪಶಕುನವೆಂದು ಹೆದರಿಕೆ ಹುಟ್ಟಿಸಿದ ಒಂದು ಹೆಣ್ಣುಮಗುವಿನ ಜನನ, ನಂತರ ಅದೇ ಕುಟುಂಬಕ್ಕೆ “ಲಕ್ಷ್ಮಿ”ಯಾಗಿ ಪರಿವರ್ತನೆಯಾದ ಕಥೆಯನ್ನು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಅವರು ಮನಮುಟ್ಟುವಂತೆ ಹಂಚಿಕೊಂಡಿದ್ದಾರೆ.
https://www.instagram.com/reel/DWdF5shkq2X/?igsh=OGJkdnZwNWFhaXB6
ಬೆಂಗಳೂರು ಮೂಲದ ಕುಟುಂಬದಲ್ಲಿ ಜನಿಸಿದ ಡಾ. ನಾಗಲಕ್ಷ್ಮಿ ಚೌದರಿ ಅವರು ತಮ್ಮ ಬಾಲ್ಯ, ಶಿಕ್ಷಣ ಹಾಗೂ ಜೀವನ ಪಯಣದ ಬಗ್ಗೆ ಮಾತನಾಡುತ್ತ, ತಮ್ಮ ಹುಟ್ಟಿನ ಸಂದರ್ಭವನ್ನು ಸ್ಮರಿಸಿದರು.
ತಂದೆ ಕೃಷ್ಣಪ್ಪ ಹಾಗೂ ತಾಯಿ ಅಮ್ಮಯ್ಯಮ್ಮ ದಂಪತಿಗೆ ಮೂವರು ಗಂಡು ಮಕ್ಕಳು ಹುಟ್ಟಿದ ಬಳಿಕ ಹೆಣ್ಣು ಮಗು ಜನಿಸಿದಾಗ, ಊರಿನಲ್ಲಿ ಕೆಲವರು ಇದನ್ನು “ಅಪಶಕುನ” ಎಂದು ಕರೆದ ಘಟನೆ ನಡೆದಿದೆ. ಯಲಹಂಕ ಸಮೀಪದ ನಾಗರಹಳ್ಳಿಯಲ್ಲಿರುವ ಅಜ್ಜಿಯ ಮನೆಯಲ್ಲಿ ಇದ್ದಾಗ, ಒಬ್ಬ ಬುಡಬುಡಿಕೆ ಬಂದು “ಈ ಮಗು ಹುಟ್ಟಿರುವುದು ಒಳ್ಳೆಯ ಲಕ್ಷಣವಲ್ಲ, ಮನೆಯಲ್ಲಿ ಏನಾದರೂ ಅನಾಹುತ ಸಂಭವಿಸಬಹುದು, ಇಲ್ಲವಾದರೆ ತಂದೆಯ ಜೀವಕ್ಕೆ ಅಪಾಯವಿರಬಹುದು” ಎಂದು ಹೇಳಿ ಹೋಗಿದ್ದಾನೆ.
ಈ ಮಾತು ಕೇಳಿದ ತಾಯಿ ಭಯಭೀತಳಾಗಿ ದುಃಖದಲ್ಲಿದ್ದರೆ, ತಂದೆ ಕೃಷ್ಣಪ್ಪ ಅವರು ಧೈರ್ಯದಿಂದ ಮುಂದಿನ ದಿನ ಆ ವ್ಯಕ್ತಿಯನ್ನು ಕರೆಸಿ, ಇಂತಹ ಭಯ ಹುಟ್ಟಿಸುವ ಮಾತುಗಳನ್ನು ಹೇಳಬಾರದು ಎಂದು ಕಠಿಣವಾಗಿ ಎಚ್ಚರಿಕೆ ನೀಡಿ ಕಳುಹಿಸಿದ್ದರು.
ನಂತರ ಕುಟುಂಬದವರು ಅರ್ಚಕರನ್ನು ಸಂಪರ್ಕಿಸಿದಾಗ, ಮಗು ಹುಟ್ಟಿದ ಸಮಯದ ಕುರಿತು ವಿಚಾರಿಸಲಾಯಿತು. “ಅಕ್ಟೋಬರ್ ತಿಂಗಳ ನವರಾತ್ರಿ ಹಬ್ಬದ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಮಗು ಹುಟ್ಟಿದೆ” ಎಂದು ತಿಳಿಸಿದಾಗ, ಅರ್ಚಕರು “ಇದು ಲಕ್ಷ್ಮಿ ದೇವಿಯ ಪ್ರವೇಶದ ಶುಭ ಸಮಯ. ಯಾವುದೇ ಅಪಶಕುನವಿಲ್ಲ. ಈ ಮಗು ಮನೆಗೆ ಐಶ್ವರ್ಯ ತರಲಿದೆ. ‘ನಾಗಲಕ್ಷ್ಮಿ’ ಎಂದು ಹೆಸರಿಡಿ” ಎಂದು ಸಲಹೆ ನೀಡಿದರು.
ಅದರಂತೆ ಮಗುವಿಗೆ “ನಾಗಲಕ್ಷ್ಮಿ” ಎಂದು ಹೆಸರಿಡಲಾಯಿತು.
ಬಾಲ್ಯದ ಸಂಕಷ್ಟಗಳಿಂದ ಪ್ರಾರಂಭವಾದ ಅವರ ಜೀವನ ಪಯಣ, ನಂತರ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ, ವೈದ್ಯಕೀಯ ವೃತ್ತಿಯಲ್ಲಿ ಸೇವೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಪ್ರಭಾವ ಬೀರುವ ಮಟ್ಟಕ್ಕೆ ಬೆಳೆಯಿತು. ಇಂದು ಅವರು ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮಹಿಳಾ ಹಕ್ಕುಗಳಿಗಾಗಿ ಶ್ರಮಿಸುತ್ತಿದ್ದಾರೆ.
“ಅಪಶಕುನ ಎಂದು ಹೇಳಿದವರು ಇದ್ದರೂ, ನಂಬಿಕೆ ಮತ್ತು ಧೈರ್ಯವೇ ನನ್ನ ಬದುಕನ್ನು ರೂಪಿಸಿತು” ಎಂದು ಡಾ. ನಾಗಲಕ್ಷ್ಮಿ ಚೌದರಿ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.












