ಜೋಳ ಖರೀದಿ ಕೇಂದ್ರದ ಮುಂದೆ ನಾಲ್ಕೈದು ದಿನಗಳಿಂದ ಕಾದು ಕುಳಿತ ರೈತರು: "ನಮ್ಮ ಗೋಳು ಕೇಳಿ ಜಿಲ್ಲಾಧಿಕಾರಿಗಳೇ" ಎಂದು ಆಕ್ರೋಶ
ಸಿಂಧನೂರು: 2025-26ನೇ ಸಾಲಿನ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ ರಾಗಿ, ಭತ್ತ ಹಾಗೂ ಬಿಳಿ ಜೋಳ ಖರೀದಿ ಪ್ರಕ್ರಿಯೆ ಆರಂಭವಾಗಿದ್ದರೂ, ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುರವಿಹಾಳ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನ ಮುಂದೆ ಜೋಳ ತುಂಬಿದ 30 ರಿಂದ 40 ಟ್ರ್ಯಾಕ್ಟರ್ಗಳು ಕಳೆದ ನಾಲ್ಕೈದು ದಿನಗಳಿಂದ ನಿಂತಿದ್ದು, ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಆರೋಪದ ಪ್ರಕಾರ, ಅಧಿಕಾರಿಗಳ ಸೂಚನೆ ಮೇರೆಗೆ ಜೋಳವನ್ನು ಖರೀದಿ ಕೇಂದ್ರಕ್ಕೆ ತಂದಿದ್ದರೂ, ಕಳೆದ ಹಲವು ದಿನಗಳಿಂದ ಜೋಳವನ್ನು ಖರೀದಿ ಮಾಡುತ್ತಿಲ್ಲ. ಮಳೆ ಬಂದು ಜೋಳ ನೆನೆದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿರುವ ರೈತರು, ತಮ್ಮ ಸಮಸ್ಯೆಗಳನ್ನು ಕೇಳುವವರೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ನಾವು ನಾಲ್ಕೈದು ದಿನಗಳಿಂದ ಕೃಷಿ ಕೆಲಸಗಳನ್ನು ಬಿಟ್ಟು ಇಲ್ಲಿ ಕಾದು ಕುಳಿತಿದ್ದೇವೆ. ನಮ್ಮ ಬಳಿ ಪಹಣಿ ಸೇರಿದಂತೆ ಎಲ್ಲಾ ಅಗತ್ಯ ದಾಖಲೆಗಳಿವೆ. ಆದರೂ ನಮ್ಮ ಜೋಳವನ್ನು ಖರೀದಿ ಮಾಡುತ್ತಿಲ್ಲ. ಆದರೆ ದಾಖಲೆಗಳಿಲ್ಲದ ಕೆಲವರ ಹೆಸರಿನಲ್ಲಿ ಪ್ರಭಾವಿಗಳ ನೂರಾರು ಚೀಲ ಜೋಳವನ್ನು ಖರೀದಿ ಮಾಡಿಕೊಳ್ಳಲಾಗುತ್ತಿದೆ" ಎಂದು ರೈತರು ಆರೋಪಿಸಿದ್ದಾರೆ.


20, 30 ಹಾಗೂ 40 ಕ್ವಿಂಟಲ್ ಜೋಳವನ್ನು ತಂದಿರುವ ಸಣ್ಣ ರೈತರನ್ನು ನಿರ್ಲಕ್ಷಿಸಲಾಗುತ್ತಿದ್ದು, ಕೇಳಿದರೆ 'ಲಾಗಿನ್ ಸಮಸ್ಯೆ ಇದೆ, ಖರೀದಿ ಮಾಡಲು ಸಾಧ್ಯವಿಲ್ಲ, ಮನೆಗೆ ಹೋಗಿ' ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ರೈತರು ದೂರಿದ್ದಾರೆ. ಇದೇ ವೇಳೆ ತಾಲೂಕಿನ ಮಲ್ಲಾಪುರ, ಹತ್ತಿಗುಡ್ಡ, ಗುಂಡಾ ಹಾಗೂ ಸಿಂಧನೂರು ಸೇರಿದಂತೆ ಇತರೆ ಖರೀದಿ ಕೇಂದ್ರಗಳಲ್ಲಿ ಜೋಳ ಖರೀದಿ ನಡೆಯುತ್ತಿದೆ. ಅಲ್ಲಿ ಚೀಟಿ ಬರೆದು ಜೋಳ ಸ್ವೀಕರಿಸುತ್ತಿರುವಾಗ, ತುರವಿಹಾಳ ಕೇಂದ್ರದಲ್ಲಿ ಮಾತ್ರ ಯಾಕೆ ಖರೀದಿ ಮಾಡುತ್ತಿಲ್ಲ ಎಂದು ರೈತರು ಪ್ರಶ್ನಿಸಿದ್ದಾರೆ.

ಖರೀದಿ ಕೇಂದ್ರಗಳು ರೈತರ ಅನುಕೂಲಕ್ಕಾಗಿ ಸ್ಥಾಪನೆಯಾಗಿದ್ದರೂ, ಕೆಲ ಪ್ರಭಾವಿಗಳು ಹಾಗೂ ಭ್ರಷ್ಟರ ಪಾಲಾಗುತ್ತಿವೆ ಎಂದು ಆರೋಪಿಸಿರುವ ರೈತರು, ಲಾಗಿನ್ ಅವಧಿ ಮುಗಿಯುವ ಮುನ್ನವೇ ಹಲವಾರು ರೈತರ ಹೆಬ್ಬೆರಳಿನ ಗುರುತು ಪಡೆದು ಈಗ ಅನಧಿಕೃತವಾಗಿ ಗೋದಾಮು ತುಂಬಿಸಿಕೊಳ್ಳಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕೂಡಲೇ ಖರೀದಿ ಕೇಂದ್ರವನ್ನು ಸಕ್ರಿಯಗೊಳಿಸಿ ರೈತರ ಜೋಳವನ್ನು ಖರೀದಿ ಮಾಡಬೇಕು. ಅಕ್ರಮವಾಗಿ ಜೋಳ ಖರೀದಿ ನಡೆಸುತ್ತಿರುವವರ ವಿರುದ್ಧ ತನಿಖೆ ನಡೆಸಬೇಕು. ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ರೈತರು ಮನವಿ ಮಾಡಿದ್ದಾರೆ.

ಅಧಿಕಾರಿಯ ಸ್ಪಷ್ಟನೆ
ಈ ಕುರಿತು ಖರೀದಿ ಕೇಂದ್ರದ ಮುಖ್ಯ ಅಧಿಕಾರಿಯನ್ನು ಸಂಪರ್ಕಿಸಿದಾಗ, "ನಮ್ಮ ಲಾಗಿನ್ ಅವಧಿ ಮುಕ್ತಾಯಗೊಂಡಿರುವುದರಿಂದ ಪ್ರಸ್ತುತ ಯಾವುದೇ ಜೋಳವನ್ನು ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ರೈತರು ನಮ್ಮ ಬಗ್ಗೆ ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ. ಇದು ನಮ್ಮ ವೈಯಕ್ತಿಕ ನಿರ್ಧಾರವಲ್ಲ, ಸರ್ಕಾರದ ತಾಂತ್ರಿಕ ವ್ಯವಸ್ಥೆಗೆ ಸಂಬಂಧಿಸಿದ ವಿಷಯವಾಗಿದೆ. ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಪತ್ರ ಬರೆದು ಹೊಸ ಲಾಗಿನ್ಗಾಗಿ ಮನವಿ ಮಾಡಿದ್ದೇವೆ. ಮತ್ತೆ ಲಾಗಿನ್ ದೊರೆತ ತಕ್ಷಣ ರೈತರ ಜೋಳ ಖರೀದಿ ಪ್ರಕ್ರಿಯೆ ಆರಂಭಿಸಲಾಗುವುದು. ಇದರಲ್ಲಿ ನಮ್ಮ ಯಾವುದೇ ವೈಯಕ್ತಿಕ ತಪ್ಪಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಸಮಸ್ಯೆ ಕುರಿತು ಸ್ಪಷ್ಟ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಆದರೆ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಜಿಲ್ಲಾಧಿಕಾರಿಗಳ ಮೇಲೆ ನಮಗೆ ಭರವಸೆ ಇದೆ. ರೈತರ ಸಂಕಷ್ಟವನ್ನು ಅರಿತು ಈ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸುತ್ತಾರೆ ಎಂಬ ನಂಬಿಕೆ ನಮ್ಮಲ್ಲಿದೆ. ಆದ್ದರಿಂದ ತುರವಿಹಾಳ ಜೋಳ ಖರೀದಿ ಕೇಂದ್ರದಲ್ಲಿನ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳು ಕೂಡಲೇ ಬಗೆಹರಿಸಿ, ರೈತರಿಗೆ ನ್ಯಾಯ ಒದಗಿಸಬೇಕು ಎಂದು ಈ ಪತ್ರಿಕೆಯ ಮೂಲಕ ಮನವಿ ಮಾಡಿಕೊಳ್ಳುತ್ತೇವೆ ಎಂದು ರೈತರು ತಿಳಿಸಿದ್ದಾರೆ.












