
ಎರಡು ಬಾರಿ ಬಯೋಮೆಟ್ರಿಕ್ ಕಡ್ಡಾಯ: ಉಪ ನಿರ್ದೇಶಕ ನಜೀರ್ ಅಹ್ಮದ್
ರಾಯಚೂರು | ಮೇ 11 BB NEWS KANNADA ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ–2013ರಡಿ ಮೇ 2026 ಮತ್ತು ಜೂನ್ 2026ರ ಮಾಹೆಯ ಆಹಾರ ಧಾನ್ಯಗಳನ್ನು ಮೇ ಮಾಹೆಯಲ್ಲಿಯೇ ವಿತರಣೆ ಮಾಡಲು ಸರ್ಕಾರ ನಿರ್ದೇಶಿಸಿರುವ ಹಿನ್ನಲೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಪಡಿತರ ಧಾನ್ಯ ವಿತರಣೆ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ನಜೀರ್ ಅಹ್ಮದ್ ತಿಳಿಸಿದ್ದಾರೆ.


ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ಕೇಂದ್ರ ವ್ಯಾಪ್ತಿಯ ಪ್ರತಿ ಅಂತ್ಯೋದಯ (AAY) ಪಡಿತರ ಚೀಟಿಗೆ ಒಟ್ಟು 70 ಕೆ.ಜಿ ಅಕ್ಕಿ ಹಾಗೂ ಕೇಂದ್ರ ಮತ್ತು ರಾಜ್ಯ ವ್ಯಾಪ್ತಿಯ ಪಿ.ಹೆಚ್.ಹೆಚ್ (BPL) ಪಡಿತರ ಚೀಟಿಯಲ್ಲಿನ ಪ್ರತಿ ಫಲಾನುಭವಿಗೆ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

🍚 ಎರಡು ಬಾರಿ ಬಯೋಮೆಟ್ರಿಕ್ ಕಡ್ಡಾಯ
ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯುವ ಸಂದರ್ಭದಲ್ಲಿ ಎರಡು ಬಾರಿ ಬಯೋಮೆಟ್ರಿಕ್ ನೀಡುವುದು ಕಡ್ಡಾಯವಾಗಿದೆ. ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸರ್ವರ್ ಲಭ್ಯವಿರುವುದರಿಂದ ಸಾರ್ವಜನಿಕರು ಈ ಸಮಯವನ್ನು ಸದ್ಬಳಕೆ ಮಾಡಿಕೊಂಡು ಪಡಿತರ ಪಡೆಯಬೇಕು ಎಂದು ಸೂಚಿಸಲಾಗಿದೆ.


ಅನ್ನಸುವಿಧಾ ಯೋಜನೆಯ ಫಲಾನುಭವಿಗಳು ಮೇ ಮತ್ತು ಜೂನ್ 2026ರ ಮಾಹೆಯ ಪಡಿತರವನ್ನು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯಲ್ಲಿ ಎರಡು ಬಾರಿ ಬಯೋಮೆಟ್ರಿಕ್ ನೀಡಿ ಪಡೆಯಬಹುದಾಗಿದೆ.

⚠️ ಒಂದೇ ಬಾರಿ ಬಯೋಮೆಟ್ರಿಕ್ ನೀಡಿದರೆ ಜೂನ್ ಪಡಿತರ ರದ್ದು
ಒಂದು ವೇಳೆ ಪಡಿತರ ಚೀಟಿದಾರರು ಕೇವಲ ಒಂದೇ ಬಾರಿ ಬಯೋಮೆಟ್ರಿಕ್ ನೀಡಿದರೆ ಜೂನ್ 2026ರ ಮಾಹೆಗೆ ಹಂಚಿಕೆಯಾದ ಆಹಾರ ಧಾನ್ಯಗಳನ್ನು ವಿತರಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ ಆ ಮಾಹೆಯ ಧಾನ್ಯಗಳು ವ್ಯಪಗತವಾಗಲಿವೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಹೀಗಾಗಿ ಫಲಾನುಭವಿಗಳು ಮೇ 31, 2026ರೊಳಗಾಗಿ ಕಡ್ಡಾಯವಾಗಿ ಎರಡು ಬಾರಿ ಬಯೋಮೆಟ್ರಿಕ್ ನೀಡಿ ಪಡಿತರ ಪಡೆಯಬೇಕು ಎಂದು ಮನವಿ ಮಾಡಲಾಗಿದೆ.
🌍 “ಒಂದು ರಾಷ್ಟ್ರ – ಒಂದು ಪಡಿತರ ಚೀಟಿ” ಯೋಜನೆ ಜಾರಿ.“ಒಂದು ರಾಷ್ಟ್ರ – ಒಂದು ಪಡಿತರ ಚೀಟಿ” (ONORC) ಯೋಜನೆ ಜಾರಿಯಲ್ಲಿರುವುದರಿಂದ ಯಾವುದೇ ರಾಜ್ಯದ ಪಡಿತರ ಚೀಟಿದಾರರು ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
📞 ದೂರುಗಳಿಗೆ ಸಹಾಯವಾಣಿ
ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಕಡಿಮೆ ಪ್ರಮಾಣದ ಪಡಿತರ ವಿತರಣೆ, ಹಣ ವಸೂಲಿ ಅಥವಾ ಇತರೆ ಅಕ್ರಮಗಳು ಕಂಡುಬಂದಲ್ಲಿ ನಿಶುಲ್ಕ ಸಹಾಯವಾಣಿ ಸಂಖ್ಯೆ 1967 ಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ. ಅಲ್ಲದೆ ಸಂಬಂಧಪಟ್ಟ ತಹಶೀಲ್ದಾರರ ಕಚೇರಿ ಅಥವಾ ಜಿಲ್ಲೆಯ ಉಪ ನಿರ್ದೇಶಕರ ಕಚೇರಿಗೂ ದೂರು ನೀಡಬಹುದಾಗಿದೆ.
🚫 ಪಡಿತರ ಮಾರಾಟ ಮಾಡಿದರೆ ಕಠಿಣ ಕ್ರಮ
ಸರ್ಕಾರದಿಂದ ವಿತರಿಸಲಾದ ಆಹಾರ ಧಾನ್ಯಗಳನ್ನು ಹಣಕ್ಕಾಗಿ ಮಾರಾಟ ಮಾಡುವುದು ಅಥವಾ ಅಕ್ರಮವಾಗಿ ಸಂಗ್ರಹಣೆ ಮಾಡುವುದು ಕಂಡುಬಂದಲ್ಲಿ ಅಂತಹ ಪಡಿತರ ಚೀಟಿದಾರರಿಗೆ ಮುಕ್ತ ಮಾರುಕಟ್ಟೆ ದರದಲ್ಲಿ ದಂಡ ವಿಧಿಸಲಾಗುವುದು. ಜೊತೆಗೆ ಆ ಪಡಿತರ ಚೀಟಿಯನ್ನು ಆರು ತಿಂಗಳ ಅವಧಿಗೆ ಅಮಾನತುಗೊಳಿಸಲಾಗುವುದು ಎಂದು ಉಪ ನಿರ್ದೇಶಕ ನಜೀರ್ ಅಹ್ಮದ್ ಎಚ್ಚರಿಕೆ ನೀಡಿದ್ದಾರೆ.
📌 ಮುಖ್ಯಾಂಶಗಳು
✅ ಎಎವೈ ಚೀಟಿಗೆ 70 ಕೆ.ಜಿ ಅಕ್ಕಿ
✅ ಬಿಪಿಎಲ್ ಫಲಾನುಭವಿಗೆ 10 ಕೆ.ಜಿ ಉಚಿತ ಅಕ್ಕಿ
✅ ಎರಡು ಬಾರಿ ಬಯೋಮೆಟ್ರಿಕ್ ಕಡ್ಡಾಯ
✅ ಮೇ 31ರೊಳಗೆ ಪಡಿತರ ಪಡೆಯಲು ಸೂಚನೆ
✅ ಅಕ್ರಮ ಪತ್ತೆಯಾದರೆ ದಂಡ ಹಾಗೂ ಚೀಟಿ ಅಮಾನತು










