
‘ಕಲಬುರಗಿ ಮಾದರಿ’ಗೆ ನೀತಿ ಆಯೋಗದ ಶ್ಲಾಘನೆ | ‘ಕಲಬುರಗಿ ನೆಕ್ಸ್ಟ್ ಫೌಂಡೇಷನ್’ ಮೂಲಕ ಭವಿಷ್ಯದ ದೃಷ್ಟಿಕೋನ

ವಿಶೇಷ ವರದಿ BB NEWS KANNADA
ಕಲಬುರ್ಗಿ ಸಾರ್ವಜನಿಕ ಆಡಳಿತದಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಜನಪರ ಕಾಳಜಿಯನ್ನು ಸಮನ್ವಯಗೊಳಿಸಿ ಕಲಬುರಗಿ ಜಿಲ್ಲೆಯ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದಿರುವವರು 2015ರ ಬ್ಯಾಚ್ನ ಐಎಎಸ್ ಅಧಿಕಾರಿ ಬಿ. ಫೌಜಿಯಾ ತರನ್ನುಮ್. ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಜಿಲ್ಲೆಯಾದ ಕಲಬುರಗಿಯಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಅವರು ಜಾರಿಗೆ ತಂದ ಹಲವು ಯೋಜನೆಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿವೆ.
ಸಾಮಾನ್ಯ ಆಡಳಿತವನ್ನು ಮೀರಿ ಆರೋಗ್ಯ, ಕೃಷಿ, ತಂತ್ರಜ್ಞಾನ, ಮಹಿಳಾ ಸಬಲೀಕರಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹೊಸ ಪ್ರಯೋಗಗಳನ್ನು ಜಾರಿಗೊಳಿಸುವ ಮೂಲಕ ಅವರು “ಜನಸ್ನೇಹಿ ಆಡಳಿತ”ಕ್ಕೆ ಹೊಸ ಅರ್ಥ ನೀಡಿದ್ದಾರೆ.


ರಾಷ್ಟ್ರಪತಿಗಳಿಂದ ರಾಷ್ಟ್ರೀಯ ಮಟ್ಟದ ಗೌರವ.ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ತಾಂತ್ರಿಕ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಸಾಧನೆಯನ್ನು ಪರಿಗಣಿಸಿ ಭಾರತ ಚುನಾವಣಾ ಆಯೋಗವು 2024-25ನೇ ಸಾಲಿನ ಅತ್ಯುತ್ತಮ ಚುನಾವಣಾ ನಿರ್ವಹಣಾ ಪ್ರಶಸ್ತಿಗೆ ಫೌಜಿಯಾ ತರನ್ನುಮ್ ಅವರನ್ನು ಆಯ್ಕೆ ಮಾಡಿತ್ತು.

ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದ ಅವರು, ಈ ಗೌರವ ಪಡೆದ ಕರ್ನಾಟಕದ ಏಕೈಕ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಆರೋಗ್ಯ ಕ್ಷೇತ್ರದಲ್ಲಿ ‘ಕಲಬುರಗಿ ಮಾದರಿ’
ಕಲಬುರಗಿ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಜಾರಿಗೊಂಡ ಸುಧಾರಣಾ ಕ್ರಮಗಳು ದೇಶದ ಗಮನ ಸೆಳೆದಿವೆ. ಮಹತ್ವಾಕಾಂಕ್ಷಿ ತಾಲ್ಲೂಕುಗಳಲ್ಲಿ ಪ್ರಸವ ಪೂರ್ವ ನೋಂದಣಿ ಮತ್ತು ಸಾಂಸ್ಥಿಕ ಹೆರಿಗೆಯಲ್ಲಿ ಶೇ.100ರಷ್ಟು ಸಾಧನೆ ಮಾಡಿರುವುದು ನೀತಿ ಆಯೋಗದ ಮೆಚ್ಚುಗೆಗೆ ಪಾತ್ರವಾಗಿದೆ.

ಮೊದಲ ತ್ರೈಮಾಸಿಕದಲ್ಲೇ ಗರ್ಭಿಣಿಯರ ನೋಂದಣಿ, ಪೌಷ್ಟಿಕ ಆಹಾರ ವಿತರಣೆ ಮತ್ತು ತಾಯಿ-ಮಗು ಆರೈಕೆ ಕಾರ್ಯಕ್ರಮಗಳ ಮೂಲಕ ತಾಯಿ ಹಾಗೂ ಶಿಶು ಮರಣ ಪ್ರಮಾಣ ತಗ್ಗಿಸಲು ಕೈಗೊಂಡ ಕ್ರಮಗಳು ಈಗ “ಕಲಬುರಗಿ ಮಾದರಿ”ಯಾಗಿ ಗುರುತಿಸಲ್ಪಟ್ಟಿವೆ.

‘ಖಡಕ್ ರೊಟ್ಟಿ’ಗೆ ಜಾಗತಿಕ ಮಾರುಕಟ್ಟೆ
ಕಲಬುರಗಿಯ ಸಾಂಪ್ರದಾಯಿಕ ‘ಮಾಲ್ದಂಡಿ’ ಜೋಳದ ಖಡಕ್ ರೊಟ್ಟಿಗೆ ಜಾಗತಿಕ ಮಾರುಕಟ್ಟೆ ಕಲ್ಪಿಸುವಲ್ಲಿ ಫೌಜಿಯಾ ತರನ್ನುಮ್ ಮಹತ್ವದ ಪಾತ್ರ ವಹಿಸಿದ್ದಾರೆ. ಕೋಟನೂರ ಡಿ ಗ್ರಾಮದಲ್ಲಿ 55 ಲಕ್ಷ ರೂ.ಗಳ ಸಿಎಸ್ಆರ್ ಅನುದಾನದಲ್ಲಿ ಆಧುನಿಕ ಪ್ಯಾಕಿಂಗ್ ಘಟಕ ಸ್ಥಾಪಿಸಿ ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲಾಯಿತು. ಈ ಯೋಜನೆಯ ಮೂಲಕ ಕಲಬುರಗಿ ರೊಟ್ಟಿ ಅಮೆರಿಕಾ, ಯುನೈಟೆಡ್ ಕಿಂಗ್ಡಮ್ ಮತ್ತು ಆಸ್ಟ್ರೇಲಿಯಾ ಮಾರುಕಟ್ಟೆಗೂ ತಲುಪಿದೆ.

ಇದರ ಜೊತೆಗೆ ‘ಖಡಕ್ ರೊಟ್ಟಿ’ಗೆ ಜಿಐ ಟ್ಯಾಗ್ ಪಡೆಯುವ ಪ್ರಯತ್ನಗಳು ಜಿಲ್ಲೆಯ ಆಹಾರ ಸಂಸ್ಕೃತಿಗೆ ಹೊಸ ಗುರುತು ನೀಡುವ ದಿಸೆಯಲ್ಲಿ ಸಾಗಿವೆ.

ತಂತ್ರಜ್ಞಾನ ಆಧಾರಿತ ಭೂ ದಾಖಲೆ ಸಂರಕ್ಷಣೆ
ಸರ್ಕಾರಿ ಜಮೀನುಗಳ ಅತಿಕ್ರಮಣ ತಡೆಯಲು ಜಾರಿಗೆ ತಂದ “ಲ್ಯಾಂಡ್ ಬೀಟ್” ವ್ಯವಸ್ಥೆ ರಾಜ್ಯಕ್ಕೆ ಮಾದರಿಯಾಗಿದೆ. ಚಿಂಚೋಳಿ ತಾಲ್ಲೂಕಿನಲ್ಲಿ 15 ಲಕ್ಷಕ್ಕೂ ಹೆಚ್ಚು ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಕಂದಾಯ ಇಲಾಖೆಯಲ್ಲಿ ಮಹತ್ವದ ಬದಲಾವಣೆ ತರಲಾಗಿದೆ.

31,972 ಸರ್ಕಾರಿ ಆಸ್ತಿಗಳ ಪೈಕಿ ಶೇ.93ಕ್ಕೂ ಹೆಚ್ಚು ಆಸ್ತಿಗಳ ಐಡೆಂಟಿಫಿಕೇಶನ್ ಪೂರ್ಣಗೊಳಿಸಿರುವುದು ಆಡಳಿತಾತ್ಮಕ ಪಾರದರ್ಶಕತೆಯತ್ತ ಮಹತ್ವದ ಹೆಜ್ಜೆಯಾಗಿದೆ.

ಕ್ರೀಡೆ ಮತ್ತು ಸಂಸ್ಕೃತಿಗೆ ಹೊಸ ಚೈತನ್ಯ
ಕಲಬುರಗಿಯನ್ನು ಕೇವಲ ಬಿಸಿಲ ನಾಡು ಎನ್ನುವ ಸೀಮಿತ ಕಲ್ಪನೆಯಾಚೆಗೆ ತೆಗೆದುಕೊಂಡು ಹೋಗುವ ಪ್ರಯತ್ನಕ್ಕೂ ಫೌಜಿಯಾ ತರನ್ನುಮ್ ಮುಂದಾದರು. ಅಂತರಾಷ್ಟ್ರೀಯ ಮಟ್ಟದ ಟೆನಿಸ್ ಟೂರ್ನಿಗಳನ್ನು ಆಯೋಜಿಸಿ ಜಿಲ್ಲೆಯ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದ ಅವರು, ಬೆಂಗಳೂರಿನ ಖ್ಯಾತ ರಂಗ ಶಂಕರ ತಂಡವನ್ನು ಜಿಲ್ಲೆಗೆ ಆಹ್ವಾನಿಸಿ ನಾಟಕೋತ್ಸವ ಆಯೋಜಿಸುವ ಮೂಲಕ ಸಾಂಸ್ಕೃತಿಕ ವಾತಾವರಣಕ್ಕೂ ಹೊಸ ಚೈತನ್ಯ ತುಂಬಿದರು.

ಸಂಕಷ್ಟದಲ್ಲೂ ಸ್ಪಂದಿಸಿದ ಮಾನವೀಯ ಆಡಳಿತ
ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಸಿಲುಕಿಕೊಂಡಿದ್ದ ಜಿಲ್ಲೆಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಕಾರ್ಯದಲ್ಲಿ ಜಿಲ್ಲಾಡಳಿತ ಮಹತ್ವದ ಪಾತ್ರವಹಿಸಿತು.ಪೋಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ವಿದೇಶಾಂಗ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮನೆ ತಲುಪುವವರೆಗೆ ತೋರಿದ ಕಾಳಜಿ ಜನಮನ ಗೆದ್ದಿತು.
‘ಜನಸ್ಪಂದನ’ ಮೂಲಕ ಮನೆಬಾಗಿಲಿಗೆ ಆಡಳಿತ
‘ಜನಸ್ಪಂದನ’ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸುವ ಪ್ರಯತ್ನ ಆಡಳಿತದ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಿತು.
ಅಭಿವೃದ್ಧಿ ಎಂದರೆ ಕೇವಲ ರಸ್ತೆ ಮತ್ತು ಕಟ್ಟಡಗಳ ನಿರ್ಮಾಣವಲ್ಲ; ಜನರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರುವುದೇ ನಿಜವಾದ ಅಭಿವೃದ್ಧಿ ಎಂಬುದನ್ನು ಫೌಜಿಯಾ ತರನ್ನುಮ್ ತಮ್ಮ ಕಾರ್ಯಶೈಲಿಯಿಂದ ಸಾಬೀತುಪಡಿಸಿದ್ದಾರೆ ಕಲಬುರಗಿಯಿಂದ ವರ್ಗಾವಣೆಯಾಗುತ್ತಿದ್ದರೂ, ಜಿಲ್ಲೆಯ ಜನಮನದಲ್ಲಿ ಅವರು “ಅಭಿವೃದ್ಧಿಯ ಚೇತನ”ವಾಗಿಯೇ ಉಳಿಯಲಿದ್ದಾರೆ.

ಬಾಕ್ಸ್ | ಸಾಧನೆಯ ಹಾದಿಯಲ್ಲೊಂದು ನೋಟ
▪️ ಐಎಎಸ್ ಬ್ಯಾಚ್ : 2015 (ಕರ್ನಾಟಕ ಕೆಡರ್)
▪️ ಚುನಾವಣಾ ಸಾಧನೆ : ರಾಷ್ಟ್ರಪತಿ ಪ್ರಶಸ್ತಿ ಪಡೆದ ಕರ್ನಾಟಕದ ಏಕೈಕ ಅಧಿಕಾರಿ
▪️ ಆರೋಗ್ಯ ಕ್ಷೇತ್ರ : ಪ್ರಸವ ಪೂರ್ವ ನೋಂದಣಿಯಲ್ಲಿ ಶೇ.100 ಸಾಧನೆ
▪️ ಜಾಗತಿಕ ಗುರುತು : ‘ಖಡಕ್ ರೊಟ್ಟಿ’ ವಿದೇಶಿ ಮಾರುಕಟ್ಟೆಗೆ ಪ್ರವೇಶ
▪️ ಡಿಜಿಟಲೀಕರಣ : ಸರ್ಕಾರಿ ಆಸ್ತಿಗಳ ಶೇ.93ಕ್ಕೂ ಹೆಚ್ಚು ಗುರುತಿಸುವಿಕೆ ಪೂರ್ಣ
▪️ ಸಾಂಸ್ಕೃತಿಕ ಕೊಡುಗೆ : ರಂಗೋತ್ಸವ ಹಾಗೂ ಅಂತರಾಷ್ಟ್ರೀಯ ಟೆನಿಸ್ ಟೂರ್ನಿಗಳ ಆಯೋಜನೆ










