ಬೆಂಗಳೂರು : “ಸಿದ್ದರಾಮಯ್ಯ ಅವರು ಕೇವಲ ವ್ಯಕ್ತಿಯಲ್ಲ, ಒಂದು ಶಕ್ತಿ. ಜನಸಾಮಾನ್ಯರ ಆಶಯ, ಹೋರಾಟ ಮತ್ತು ಸಾಮಾಜಿಕ ನ್ಯಾಯದ ಪ್ರತೀಕ” ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿರುವ ಅವರು, ಗಣಿ ಧೂಳಿ ಮತ್ತು ರಾಜಕೀಯ ಅರಾಜಕತೆಯಿಂದ ಅಕ್ಷರಶಃ ನಲುಗಿ ಹೋಗಿದ್ದ ಬಳ್ಳಾರಿಯ ನೆಲದಲ್ಲಿ ಪಾದಯಾತ್ರೆ ನಡೆಸಿ ಕಾಂಗ್ರೆಸ್ ಪಕ್ಷದ ಭರ್ಜರಿ ಗೆಲುವಿಗೆ ಮುನ್ನುಡಿ ಬರೆದದ್ದು ಸಿದ್ದರಾಮಯ್ಯ ಅವರ ರಾಜಕೀಯ ಜೀವನದ ಮಹತ್ವದ ಘಟ್ಟ ಎಂದು ಉಲ್ಲೇಖಿಸಿದ್ದಾರೆ. 2013ರಿಂದ 2018ರವರೆಗೆ ಸಿದ್ದರಾಮಯ್ಯ ಅವರು ನೀಡಿದ ಆಡಳಿತ ರಾಜ್ಯದ ಇತಿಹಾಸದಲ್ಲಿ ವಿಶೇಷ ಅಧ್ಯಾಯವಾಗಿದ್ದು, ಜನಪರ ಯೋಜನೆಗಳು ಮತ್ತು ಸಾಮಾಜಿಕ ನ್ಯಾಯದ ಪರವಾದ ಆಡಳಿತದಿಂದ ಅವರು ರಾಜ್ಯದ ಜನಮನ ಗೆದ್ದಿದ್ದರು ಎಂದು ಅವರು ಹೇಳಿದ್ದಾರೆ.


ಮೈಸೂರಿನ ಒಂದು ಸಣ್ಣ ಹಳ್ಳಿಯಿಂದ ಹೊರಟು ರಾಜ್ಯದ ಅತ್ಯುನ್ನತ ಹುದ್ದೆಯವರೆಗೆ ಏರಿದ ಸಿದ್ದರಾಮಯ್ಯ ಅವರು, ತಮ್ಮ ರಾಜಕೀಯ ಜೀವನವನ್ನೇ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಹಾಗೂ ಸಾಮಾನ್ಯ ಜನರ ಹಕ್ಕುಗಳಿಗಾಗಿ ಸಮರ್ಪಿಸಿಕೊಂಡಿದ್ದರು. ಸಾಮಾಜಿಕ ನ್ಯಾಯದ ಕನಸನ್ನು ಸಾಕಾರಗೊಳಿಸಲು ಅವರು ತೋರಿದ ಬದ್ಧತೆ ಮತ್ತು ಹೋರಾಟ ಕನ್ನಡನಾಡಿನ ರಾಜಕೀಯ ಇತಿಹಾಸದಲ್ಲಿ ಸದಾ ಸ್ಮರಣೀಯವಾಗಿರಲಿದೆ ಎಂದು ಮಹದೇವಪ್ಪ ತಿಳಿಸಿದ್ದಾರೆ.

“ಸುಮಾರು ನಾಲ್ಕು ದಶಕಗಳ ಕಾಲ ಅವರೊಂದಿಗೆ ಒಡನಾಟ ಹೊಂದಿರುವ ನಾನು, ಅನೇಕ ಏಳುಬೀಳುಗಳನ್ನು ಹತ್ತಿರದಿಂದ ಕಂಡಿದ್ದೇನೆ. ಆದರೆ ಯಾವುದೇ ಸಂಕಷ್ಟ ಬಂದರೂ ಜನರ ಪ್ರೀತಿ ಮತ್ತು ಬೆಂಬಲದ ಶಕ್ತಿಯಿಂದ ಅವರು ಎಲ್ಲ ಮತೀಯ ಹಾಗೂ ಫ್ಯೂಡಲ್ ಶಕ್ತಿಗಳ ವಿರುದ್ಧ ದಿಟ್ಟವಾಗಿ ನಿಂತು ಜಯ ಸಾಧಿಸಿದರು. ಅವರ ಎದೆಗಾರಿಕೆ ಸಾರ್ವಜನಿಕ ಜೀವನಕ್ಕೆ ಬರುವ ಪ್ರತಿಯೊಬ್ಬರಿಗೂ ಮಾದರಿ” ಎಂದು ಅವರು ಹೇಳಿದ್ದಾರೆ. ಸಾಮಾನ್ಯ ಜನರ ಭಾವನೆಗಳನ್ನು ಅರ್ಥಮಾಡಿಕೊಂಡು ರಾಜಕೀಯದಲ್ಲಿ ಬೆಳೆದ ಸಿದ್ದರಾಮಯ್ಯ ಅವರು, ತಮ್ಮ aggressive nature ಅನ್ನು ಕಾಲಕ್ರಮೇಣ ಸಮಚಿತ್ತ ಮನೋಭಾವಕ್ಕೆ ಪರಿವರ್ತಿಸಿಕೊಂಡರು. ಕಳೆದ ಒಂದು ದಶಕದಲ್ಲಿ ಅವರು ರೂಢಿಸಿಕೊಂಡ ರಾಜಕೀಯ ಪ್ರೌಢಿಮೆ, ತಾಳ್ಮೆ ಮತ್ತು ನಿರ್ಧಾರ ಸಾಮರ್ಥ್ಯವೇ ಅವರ ಯಶಸ್ಸಿಗೆ ಪ್ರಮುಖ ಕಾರಣ ಎಂದು ಅವರು ವಿಶ್ಲೇಷಿಸಿದ್ದಾರೆ.

“ಇಂತಹ ಧೀಮಂತ ನಾಯಕ, ಆಧುನಿಕ ಕರ್ನಾಟಕ ರಾಜಕೀಯದ ಅರಸನೆಂದೇ ಕರೆಯಬಹುದಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ರಾಜೀನಾಮೆ ಸಲ್ಲಿಸಿರುವುದು ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ” ಎಂದು ಮಹದೇವಪ್ಪ ಅಭಿಪ್ರಾಯಪಟ್ಟಿದ್ದಾರೆ. ಕೊನೆಯಲ್ಲಿ, “ಜಾತಿ-ಧರ್ಮದ ಭೇದವಿಲ್ಲದೆ ಎಲ್ಲರಿಗೂ ಒಳ್ಳೆಯದನ್ನು ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ ಸಿದ್ದರಾಮಯ್ಯ ಅವರಿಗೆ ಮುಂದಿನ ದಿನಗಳಲ್ಲಿಯೂ ಒಳಿತು, ಯಶಸ್ಸು ಮತ್ತು ಜನಾಶೀರ್ವಾದ ದೊರೆಯಲಿ ಎಂದು ಮನದುಂಬಿ ಹಾರೈಸುತ್ತೇನೆ” ಎಂದು ಡಾ. ಹೆಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.












