
ಬೇರೊಂದು ವಸತಿ ನಿಲಯದ ನಿಲಯ ಪಾಲಕ ರಾಮಣ್ಣ ಬಂದು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯಕ್ಕೆ ಯತ್ನ....! ಮೂಲ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳ ಆಕ್ರೋಶ – ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ
ಮೇ 19. BB NEWS KANNADA
Sindhanur : ಸಿಂಧನೂರಿನ ಪರಿಶಿಷ್ಟ ಜಾತಿ ಬಾಲಕರ ವಸತಿ ನಿಲಯದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ತೀವ್ರವಾಗಿದ್ದು, ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫ್ಯಾನ್ ಇಲ್ಲ, ಕುಡಿಯುವ ನೀರಿನ ಸಮಸ್ಯೆ, ಸರಿಯಾದ ಊಟದ ವ್ಯವಸ್ಥೆ ಇಲ್ಲ, ಕೊಳೆತ ತರಕಾರಿಗಳ ಬಳಕೆ, ಬಾತ್ರೂಮ್ಗಳಿಗೆ ಬಾಗಿಲುಗಳ ಕೊರತೆ, ನಾರುತ್ತಿರುವ ಕೊಠಡಿಗಳು ಸೇರಿದಂತೆ ಅನೇಕ ಸಮಸ್ಯೆಗಳ ಮಧ್ಯೆ ವಿದ್ಯಾರ್ಥಿಗಳು ಜೀವನ ಸಾಗಿಸುತ್ತಿದ್ದಾರೆ ಎಂದು ದೂರಿದ್ದಾರೆ.
ವಿದ್ಯಾರ್ಥಿಗಳ ಪ್ರಕಾರ, ಕಳೆದ ಒಂದು ವರ್ಷದಿಂದ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಲ್ಲ. ದೂರು ನೀಡಿದ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ತೊಂದರೆ ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. “ಹೆಚ್ಚಾಗಿ ಮಾತನಾಡಿದರೆ ನಮ್ಮ ಮೇಲೆಯೇ ಒತ್ತಡ ಹಾಕುತ್ತಾರೆ. ಸಮಸ್ಯೆ ಕೇಳಿದರೆ ನಿರ್ಲಕ್ಷ್ಯ ಮಾಡುತ್ತಾರೆ” ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದರು.
ಊಟದ ಗುಣಮಟ್ಟದ ಬಗ್ಗೆ ಗಂಭೀರ ಆರೋಪ
ವಸತಿ ನಿಲಯದಲ್ಲಿ ಬಳಸುವ ಅಡುಗೆ ಪಾತ್ರೆಗಳು ತೂತುಬಿದ್ದಿದ್ದು, ಅಡುಗೆ ಸಿಬ್ಬಂದಿಗೆ ಸಮವಸ್ತ್ರ ಹಾಗೂ ಕ್ಯಾಪ್ಗಳ ವ್ಯವಸ್ಥೆಯೇ ಇಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. “ಕೂದಲು ಬಿದ್ದರೂ ಅದೇ ಊಟ ತಿನ್ನಬೇಕಾಗಿದೆ” ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು. ತರಕಾರಿಗಳು ಸ್ವಚ್ಛವಾಗಿಲ್ಲದೆ ಕೊಳೆತ ಸ್ಥಿತಿಯಲ್ಲೇ ಬರುತ್ತಿವೆ ಎಂದು ದೂರಿದರು.

ಓದಿಗೆ ಅಗತ್ಯ ಸೌಲಭ್ಯಗಳ ಕೊರತೆ
ವಿದ್ಯಾರ್ಥಿಗಳ ಪ್ರಕಾರ, ವಸತಿ ನಿಲಯದಲ್ಲಿ ಲೈಬ್ರರಿ ವ್ಯವಸ್ಥೆಯೇ ಇಲ್ಲ. CET ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯ ಪುಸ್ತಕಗಳಿಲ್ಲ. ದಿನಪತ್ರಿಕೆ, ಮ್ಯಾಗಜೀನ್ಗಳನ್ನೂ ಸರಿಯಾಗಿ ತರಿಸುವುದಿಲ್ಲ. ಕೊಠಡಿಗಳ ಬಾಗಿಲು, ಕಿಟಕಿಗಳು ಒಡೆದುಹೋಗಿದ್ದು, ರಾತ್ರಿ ವೇಳೆ ಸೊಳ್ಳೆಗಳ ಕಾಟದಿಂದ ಓದುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು.


ಅಧಿಕಾರಿಗಳ ಸ್ಪಷ್ಟನೆ
ಈ ಕುರಿತು ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ನಟರಾಜ್, “ನಾನು ತಾಲೂಕು ಅಧಿಕಾರಿ, ವ್ಯವಸ್ಥಾಪಕ ಹಾಗೂ ನಿಲಯ ಪಾಲಕರ ಜವಾಬ್ದಾರಿಗಳನ್ನು ಒಬ್ಬನೇ ನಿರ್ವಹಿಸುತ್ತಿದ್ದೇನೆ. ಎಲ್ಲ ಕೆಲಸಗಳನ್ನು ಒಬ್ಬನೇ ಮಾಡುವುದು ಕಷ್ಟವಾಗಿದೆ. ಹೊಸ ನಿಲಯ ಪಾಲಕರನ್ನು ನೇಮಿಸಲು ಪ್ರಯತ್ನಿಸಿದರೂ ವಿದ್ಯಾರ್ಥಿಗಳೇ ವಿರೋಧ ವ್ಯಕ್ತಪಡಿಸುತ್ತಾರೆ. ಸಿಬ್ಬಂದಿ ಮೇಲಾಧಿಕಾರಿಗಳ ಪ್ರಭಾವ ತಂದು ಒತ್ತಡ ಹೇರುತ್ತಾರೆ. ಆದರೂ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಲು ಪ್ರಯತ್ನ ಮಾಡುತ್ತೇವೆ” ಎಂದು ಸ್ಪಷ್ಟನೆ ನೀಡಿದರು.

ವಸತಿ ನಿಲಯದಲ್ಲಿ ಮದ್ಯಪಾನದ ಆರೋಪ
ವಸತಿ ನಿಲಯದ ಪಕ್ಕದ ಅಂಗಡಿಯಿಂದ ಮದ್ಯ ತಂದು ಕೆಲವರು ವಸತಿ ನಿಲಯದಲ್ಲೇ ಮದ್ಯಪಾನ ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಈ ವಿಚಾರವಾಗಿ ಪ್ರಶ್ನೆ ಮಾಡಿದಾಗ ಕೆಲವರು ವಿದ್ಯಾರ್ಥಿಗಳಿಗೇ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.
ಈ ವೇಳೆ ಅಧಿಕಾರಿಯೊಬ್ಬರು “ನೀವೂ ಮದ್ಯಪಾನ ಮಾಡುತ್ತೀರಿ, ಪರೀಕ್ಷೆಗೆ ಬನ್ನಿ” ಎಂದು ವಿದ್ಯಾರ್ಥಿಗಳನ್ನೇ ಪ್ರಶ್ನಿಸಿದಾಗ, “ನಾವು ಯಾವ ತಪ್ಪೂ ಮಾಡಿಲ್ಲ, ಈಗಲೇ ಪರೀಕ್ಷೆಗೆ ಬರಲು ಸಿದ್ಧ” ಎಂದು ವಿದ್ಯಾರ್ಥಿಗಳು ತಿರುಗೇಟು ನೀಡಿದ್ದಾರೆ. ಅಲ್ಲದೆ ಕರ್ತವ್ಯದ ಸಮಯದಲ್ಲೇ ಅಧಿಕಾರಿಗಳು ಗುಟ್ಕಾ ಸೇವನೆ ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದು, ಕೆಲಕಾಲ ವಾಗ್ವಾದವೂ ನಡೆಯಿತು.


ಮಾಧ್ಯಮದ ಎದುರಲ್ಲೇ ಉದ್ವಿಗ್ನ ಪರಿಸ್ಥಿತಿ
ಈ ಸಂದರ್ಭ ಮತ್ತೊಬ್ಬ ನಿಲಯ ಪಾಲಕ ರಾಮಣ್ಣ ಸ್ಥಳಕ್ಕೆ ಬಂದು ವಿದ್ಯಾರ್ಥಿಗಳೊಂದಿಗೆ ವಾಗ್ವಾದ ನಡೆಸಿದರೆಂಬ ಆರೋಪ ಕೇಳಿಬಂದಿದೆ. “ಎಲ್ಲರೂ ಬನ್ನಿ, ಮುಚ್ಚಿಕೊಂಡು ಊಟ ಮಾಡಿ” ಎಂದು ವಿದ್ಯಾರ್ಥಿಗಳನ್ನು ಎಳೆದುಕೊಂಡು ಹೋಗಲು ಯತ್ನಿಸಿದ್ದಾನೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.


ಮಾಧ್ಯಮದವರು ಗುರುತಿನ ಚೀಟಿ ಬಗ್ಗೆ ಪ್ರಶ್ನಿಸಿದಾಗ, “ನಾನು ಇಲಾಖೆಯವನು, ಎಲ್ಲ ವಸತಿ ನಿಲಯಕ್ಕೂ ಹೋಗಬಹುದು” ಎಂದು ಉತ್ತರಿಸಿದ್ದಾನೆ ಎನ್ನಲಾಗಿದೆ. ಕರ್ತವ್ಯದ ಸಮಯದಲ್ಲಿ ಗುರುತಿನ ಚೀಟಿ ಧರಿಸಬೇಕೆಂಬ ಜಿಲ್ಲಾ ಪಂಚಾಯತ್ ಆದೇಶವಿದ್ದರೂ ಪಾಲಿಸದಿರುವುದೇಕೆ ಎಂದು ಪ್ರಶ್ನಿಸಿದಾಗ, “ಯಾರಿಗೆ ಬೇಕಾದರೂ ಹೇಳಿ” ಎಂದು ಉತ್ತರಿಸಿದನೆಂಬ ಆರೋಪ ಕೇಳಿಬಂದಿದೆ.

ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಗಳು ವಿದ್ಯಾರ್ಥಿಗಳು ವಸತಿ ನಿಲಯದ ಸಮಸ್ಯೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಪ್ರಮುಖ ಸಮಸ್ಯೆಗಳು:
- ಲೈಬ್ರರಿ ಹಾಗೂ CET ಪುಸ್ತಕಗಳ ಕೊರತೆ
- ದಿನಪತ್ರಿಕೆ ಮತ್ತು ಮ್ಯಾಗಜೀನ್ ವ್ಯವಸ್ಥೆ ಇಲ್ಲ
- ಬಾತ್ರೂಮ್ಗಳ ಸ್ವಚ್ಛತೆ ಹಾಗೂ ಬಾಗಿಲುಗಳ ಕೊರತೆ
- ಸರಿಯಾದ ನೀರು, ಕರೆಂಟ್, ಫ್ಯಾನ್, ಬಲ್ಬ್ ವ್ಯವಸ್ಥೆ ಇಲ್ಲ
- ಕುಡಿಯುವ ನೀರಿನ ಸಮಸ್ಯೆ
- ಕೊಠಡಿಗಳ ಕಿಟಕಿ, ಸ್ವಿಚ್ ಬೋರ್ಡ್ ಹಾಳಾಗಿರುವುದು
- ಅಡುಗೆ ಸಾಮಾನುಗಳ ಕೊರತೆ
- ಸಿಬ್ಬಂದಿಗೆ ಯೂನಿಫಾರ್ಮ್ ಇಲ್ಲ
- ತರಕಾರಿಗಳ ಗುಣಮಟ್ಟ ಕೆಟ್ಟಿರುವುದು
- ಹಾಸ್ಟೆಲ್ ಕ್ಲೀನಿಂಗ್ ಸರಿಯಾಗಿ ನಡೆಯದಿರುವುದು
- ಸ್ಪೋರ್ಟ್ಸ್ ಕಿಟ್ ಹಾಗೂ ವಿದ್ಯಾರ್ಥಿ ಕಿಟ್ ವಿಳಂಬ
- ಸ್ನಾನಕ್ಕೆ ಬಕೆಟ್ಗಳ ಕೊರತೆ
- ನಿಲಯ ಪಾಲಕರು ಸರಿಯಾಗಿ ಭೇಟಿ ನೀಡದಿರುವುದು
ಕ್ರಮಕ್ಕೆ ಒತ್ತಾಯ
ಒಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಈ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದು, ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.










