

📍Raichur | ವಿಶೇಷ ವರದಿ bb news kannada
ಯಾಪಲದಿನ್ನಿ ಕೊಲೆ ಪ್ರಕರಣವನ್ನು ಅತ್ಯಂತ ತ್ವರಿತಗತಿಯಲ್ಲಿ ಭೇದಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಹಿನ್ನೆಲೆ ಬಳಗಾನೂರು ಪೊಲೀಸ್ ಠಾಣೆಯ ಪಿಎಸ್ಐ Eriyappa Angadi ಅವರಿಗೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಐಪಿಎಸ್ ಅಧಿಕಾರಿ Arunanshu Giri ಅವರು ಪ್ರಶಂಸಾಪತ್ರ ನೀಡಿ ಗೌರವಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿ ಅಲ್ಪಾವಧಿಯಲ್ಲೇ ಆರೋಪಿಯನ್ನು ಬಂಧಿಸಿದ ಪಿಎಸ್ಐ ಎರಿಯಪ್ಪ ಅಂಗಡಿ ಅವರ ಕಾರ್ಯವೈಖರಿಯನ್ನು ಎಸ್ಪಿ ಅರುಣಾಂಶು ಗಿರಿ ಶ್ಲಾಘಿಸಿದ್ದು, ಕರ್ತವ್ಯನಿಷ್ಠೆ ಹಾಗೂ ಜನಪರ ಸೇವಾಭಾವದಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಇಂತಹ ಗೌರವಗಳು ಪ್ರೇರಣೆಯಾಗುತ್ತವೆ ಎಂದು ತಿಳಿಸಿದ್ದಾರೆ.

ರಾಯಚೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿರುವ ಎರಿಯಪ್ಪ ಅಂಗಡಿ ಅವರು ಸಾರ್ವಜನಿಕರೊಂದಿಗೆ ಸ್ನೇಹಪರವಾಗಿ ನಡೆದುಕೊಳ್ಳುವ ಮೂಲಕ “ಜನಸ್ನೇಹಿ ಪೊಲೀಸ್ ಅಧಿಕಾರಿ” ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಾಮಾಣಿಕತೆ, ದಕ್ಷತೆ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಗುಣದಿಂದ ಅವರು ಸ್ಥಳೀಯ ಜನರ ಮೆಚ್ಚುಗೆ ಗಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿಯೂ ಅವರ ಕಾರ್ಯವೈಖರಿಯನ್ನು ಮೆಚ್ಚಿ ಹಲವರು ಅಭಿನಂದನೆ ಸಲ್ಲಿಸುತ್ತಿದ್ದು, “ಇನ್ನಷ್ಟು ಪ್ರಶಂಸಾಪತ್ರಗಳು ಹಾಗೂ ಉನ್ನತ ಹುದ್ದೆಗಳು ದೊರಕಲಿ” ಎಂದು ಹಾರೈಸುತ್ತಿದ್ದಾರೆ.

ಸಾರ್ವಜನಿಕರು ಪ್ರತಿಕ್ರಿಯೆ ನೀಡುತ್ತಾ, “ಪೊಲೀಸ್ ಇಲಾಖೆಯ ಬಗ್ಗೆ ಕೆಲವೊಮ್ಮೆ ನಕಾರಾತ್ಮಕ ಸುದ್ದಿಗಳು ಕೇಳಿಬರುವ ಈ ಸಂದರ್ಭದಲ್ಲಿ ಜನಪರ ಕಾಳಜಿ ಹೊಂದಿರುವ ಅಧಿಕಾರಿಗಳು ಇಲಾಖೆಯ ಗೌರವವನ್ನು ಹೆಚ್ಚಿಸುತ್ತಿದ್ದಾರೆ. ಎಲ್ಲ ಪೊಲೀಸರು ಒಂದೇ ರೀತಿಯವರಲ್ಲ ಎಂಬುದಕ್ಕೆ ಎರಿಯಪ್ಪ ಅಂಗಡಿ ಅವರೇ ಉತ್ತಮ ಉದಾಹರಣೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜನಸೇವೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಇನ್ನಷ್ಟು ಸಾಧನೆ ಮಾಡಿ ಸಾರ್ವಜನಿಕರ ವಿಶ್ವಾಸ ಗಳಿಸಲಿ ಎಂದು ಸಾರ್ವಜನಿಕರು ಹಾಗೂ ಅಭಿಮಾನಿಗಳು ಹಾರೈಸಿದ್ದಾರೆ.










