ಚಳಿಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದರೆ, ಇದಕ್ಕಿಂತ ದೊಡ್ಡ ಆಡಳಿತ ವೈಫಲ್ಯ ಇನ್ನೇನು ಬೇಕು? ಸಿಂಧನೂರು ನಗರದಲ್ಲಿ ಏಳು ರಿಂದ ಎಂಟು ದಿನಕ್ಕೊಮ್ಮೆ ಕೇವಲ ಎರಡು ಗಂಟೆಗಳಷ್ಟೇ ನೀರು ಬಿಡುತ್ತಿರುವ ನಗರಸಭೆಯ ಧೋರಣೆ ಸಾರ್ವಜನಿಕರ ಸಹನಶೀಲತೆಯನ್ನೇ ಪರೀಕ್ಷಿಸುವಂತಾಗಿದೆ.
ಎರಡು ಗಂಟೆಗಳ ಕಾಲ ಬಿಡುವ ನೀರೂ ಸಹ ಕಸ–ಕಡ್ಡಿ, ಮಣ್ಣು ಮಿಶ್ರಿತ ಗಲೀಜು ನೀರು ಆಗಿದ್ದು, ಅದನ್ನು ಕುಡಿಯುವುದಂತೂ ದೂರ, ಮನೆಯ ಬಳಕೆಗೂ ಯೋಗ್ಯವಲ್ಲ ಎಂಬ ಆರೋಪಗಳು ಎಲ್ಲೆಡೆ ಕೇಳಿಬರುತ್ತಿವೆ. ಕುಡಿಯುವ ನೀರು ಕೊಡಲಾಗದ ನಗರಸಭೆ ಇನ್ನೇನು ಆಡಳಿತ ನಡೆಸುತ್ತಿದೆ? ಎಂಬ ಪ್ರಶ್ನೆ ಸಾರ್ವಜನಿಕರ ಮನಸ್ಸಿನಲ್ಲಿ ಮೂಡಿದೆ.

ಏಷ್ಯಾದಲ್ಲಿ ನಂಬರ್ ಒನ್ ತಾಲೂಕು ಎಂಬ ಹೆಸರಿಗಿಂತ ವಾಸ್ತವ್ಯವೇ ಬೇರೆ ಎಂಬುದನ್ನು ಸಿಂಧನೂರು ನಗರಸಭೆ ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ. ಏಳು–ಎಂಟು ದಿನಕ್ಕೊಮ್ಮೆ ನೀರು ಬಿಡುತ್ತಿರುವುದರಿಂದ ಜನರು ಖಾಸಗಿ ಟ್ಯಾಂಕರ್ಗಳ ಮೊರೆ ಹೋಗಿ ಹಣ ಸುರಿಯುವಂತಾಗಿದೆ. ಬಡವರ ಪಾಲಿಗೆ ಇದು ಶೋಷಣೆಯೇ ಆಗಿದ್ದು, ಮಧ್ಯಮ ವರ್ಗದವರಿಗೆ ಭಾರೀ ಆರ್ಥಿಕ ಹೊಡೆತವಾಗಿದೆ.
ವಾಟರ್ಮ್ಯಾನ್ಗಳಿಗೆ ದೂರು ನೀಡಿದರೆ ಕಿವಿಗೇ ಬೀಳುವುದಿಲ್ಲ, ನಗರಸಭೆ ಆಯುಕ್ತರಿಗೆ ತಿಳಿಸಿದರೂ ಯಾವುದೇ ಪ್ರತಿಕ್ರಿಯೆ ಇಲ್ಲ. ಹಾಗಾದರೆ ಈ ನಗರವನ್ನು ಯಾರು ನೋಡಿಕೊಳ್ಳುತ್ತಿದ್ದಾರೆ? ಅಧಿಕಾರಿಗಳು ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆಯೇ ಅಥವಾ ಜನರ ಸಂಕಷ್ಟವನ್ನು ನೋಡಲು ಅಸಮರ್ಥರಾಗಿದ್ದಾರೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಸ್ಥಳೀಯರ ಪ್ರಕಾರ, ಮೂರರಿಂದ ನಾಲ್ಕು ದಿನಕ್ಕೊಮ್ಮೆ ನೀರು ಬಿಡುವುದೇ ಸಾಕು, ಆಗ ಕೆರೆಗಳಲ್ಲೂ ನೀರು ಉಳಿಯುತ್ತದೆ, ಜನರಿಗೂ ನೆಮ್ಮದಿ ಸಿಗುತ್ತದೆ. ಆದರೆ ಯಾವುದೇ ಯೋಜನೆ ಇಲ್ಲದೆ, ಬೇಕಾಬಿಟ್ಟಿಯಾಗಿ ಏಳು–ಎಂಟು ದಿನಕ್ಕೊಮ್ಮೆ ನೀರು ಬಿಡುವ ಮೂಲಕ ಸಾರ್ವಜನಿಕರನ್ನು ಕಿರಿಕಿರಿ ಮಾಡಲಾಗುತ್ತಿದೆ ಎಂಬ ಆರೋಪ ಗಂಭೀರವಾಗಿದೆ.
ಚಳಿಗಾಲದಲ್ಲೇ ಈ ಸ್ಥಿತಿ ಇದ್ದರೆ, ಬೇಸಿಗೆಯಲ್ಲಿ ಸಿಂಧನೂರಿನ ಜನರು ನೀರಿಗಾಗಿ ರಸ್ತೆಗೆ ಇಳಿಯಬೇಕಾಗುತ್ತದೆಯೇ? ಎಂಬ ಆತಂಕ ಎಲ್ಲೆಡೆ ವ್ಯಕ್ತವಾಗಿದೆ. ಇದಕ್ಕೂ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ, ಜನರ ಸಹನೆ ಮುಗಿಯುವ ದಿನ ದೂರವಿಲ್ಲ.
ಈಗಲಾದರೂ ನಗರಸಭೆ ಆಯುಕ್ತರು ನಿದ್ರಾವಸ್ಥೆಯಿಂದ ಎಚ್ಚೆತ್ತು, ಸಂಬಂಧಪಟ್ಟ ವಾಟರ್ಮ್ಯಾನ್ಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿ ನೀರು ಸರಬರಾಜು ವ್ಯವಸ್ಥೆಯನ್ನು ಸರಿಪಡಿಸಬೇಕಾಗಿದೆ. ಇಲ್ಲವಾದರೆ, “ಏಷ್ಯಾದ ನಂಬರ್ ಒನ್ ತಾಲೂಕು” ಎಂಬ ಹೆಸರಿಗೆ ಸಿಂಧನೂರು ನಗರವೇ ಅಪಮಾನವಾಗಲಿದೆ.













