FSSAI ಪರವಾನಿಗೆಯ ಹೆಸರಿನಲ್ಲಿ ಲಂಚದ ಆಟ – “ಬಡವರ ಬಾರಕೋಲು” ಕ್ಯಾಮರಾದಲ್ಲಿ ಸೆರೆಯಾದ ಡಾ. ಅಯ್ಯನಗೌಡ
ಸಿಂಧನೂರು: ಜನವರಿ 30
ಸಿಂಧನೂರು ತಾಲೂಕು ಆರೋಗ್ಯ ಅಧಿಕಾರಿಯಾಗಿರುವ ಡಾ. ಅಯ್ಯನಗೌಡ ಅವರ ಲಂಚದಾಟ ಇದೀಗ “ಬಡವರ ಬಾರಕೋಲು” ಮಾಧ್ಯಮದ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದ್ದು, ತಾಲೂಕು ಮಟ್ಟದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಪ್ರಸ್ತುತ ಡಾ. ಅಯ್ಯನಗೌಡ ಅವರು ಪ್ರಾಥಮಿಕ ಆರೋಗ್ಯ ಕೇಂದ್ರ ಬಾದರ್ಲಿ, ಗಾಂಧಿನಗರ, ಸಮುದಾಯ ಆರೋಗ್ಯ ಕೇಂದ್ರ ತುರವಿಹಾಳ ಹಾಗೂ ಆಹಾರ ಸುರಕ್ಷತಾ ಅಧಿಕಾರಿ (ಪ್ರಭಾರ) ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ. ಆದರೆ ಈ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು FSSAI (ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ) ಪರವಾನಿಗೆ ನೀಡುವ ನೆಪದಲ್ಲಿ ಸಣ್ಣಪುಟ್ಟ ವ್ಯಾಪಾರಿಗಳಿಂದ ಸರ್ಕಾರ ನಿಗದಿ ಪಡಿಸಿರುವ ನೂರು ರೂಪಾಯಿ ಶುಲ್ಕದ ಬದಲು ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

“ಸಾವಿರಾರು ರೂಪಾಯಿ ದೊಡ್ಡದೇ ಅಲ್ಲ” – ಕ್ಯಾಮರಾ ಮುಂದೆ ಬಾಯಿಬಡವಡಿಕೆ
ಕ್ಯಾಮರಾ ಎದುರು ಮಾತನಾಡಿದ ಡಾ. ಅಯ್ಯನಗೌಡ ಅವರು,
“ಸರ್ಕಾರದ ದರ ನೂರು ರೂಪಾಯಿ ಇದ್ದರೂ ಸಾವಿರಾರು ರೂಪಾಯಿ ಯಾಕೆ ಕೇಳುತ್ತಿದ್ದೀರಿ?” ಎಂಬ ಪ್ರಶ್ನೆಗೆ,
“ಏನೋ ತಿಪ್ಪಲ ಇರುತ್ತವೆ ಸರ್… ಕಂಪ್ಯೂಟರ್ ಆಪರೇಟರ್ಗೆ ಕೊಡಬೇಕು… ಬೇರೆ ಸಮಸ್ಯೆಗಳು ಇರುತ್ತವೆ… ಇವರಿಗೆ, ಅವರಿಗ, ಮೇಲಾಧಿಕಾರಿಗಳಿಗೆ ಕೊಡಬೇಕು”
ಎಂದು ಬಾಯಿಬಡವಡಿಸಿದ್ದಾರೆ ಎನ್ನಲಾಗಿದೆ.

ಇಷ್ಟೇ ಅಲ್ಲದೆ“ನಾನೇನು ದೊಡ್ಡ ಮಟ್ಟದಲ್ಲಿ ತೆಗೆದುಕೊಂಡಿದ್ದೇನಾ? ಸಾವಿರಾರು ರೂಪಾಯಿ ಇವರಿಗೆ ದೊಡ್ಡದಲ್ಲ ಸರ್. ಅಷ್ಟು ದುಡ್ಡು ಇಸ್ಕೊಂಡರೆ ಇವರಿಗೆ ಒಂದು ಭಯ ಇರುತ್ತದೆ”
ಎಂದು ಹೇಳಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಮತ್ತಷ್ಟು ಎಣ್ಣೆ ಸುರಿದಂತಾಗಿದೆ.
ಸಣ್ಣ ವ್ಯಾಪಾರಿಗಳ ಮೇಲೆ ದಬ್ಬಾಳಿಕೆ
ಈ ಲಂಚದಾಟದಿಂದ ಸಿಂಧನೂರಿನ ಸಣ್ಣಪುಟ್ಟ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಹಾರ ಪರವಾನಿಗೆಯಿಲ್ಲದೆ ವ್ಯಾಪಾರ ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ, ಅಧಿಕಾರಿಯ ಒತ್ತಡಕ್ಕೆ ಮಣಿದು ಹಣ ನೀಡಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ.
ಕಾರ್ಯಾಲಯವೇ ಸಿಗಲ್ಲ – ಜನರಿಗೆ ದಿಕ್ಕು ತಪ್ಪಾಟ
ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯಕ್ಕೆ ಸಾರ್ವಜನಿಕರು ಹೋದಾಗ ಬಹುತೇಕ ಸಮಯದಲ್ಲಿ ಬೀಗ ಜಡಿದಿರುತ್ತದೆ ಎನ್ನುವುದು ಮತ್ತೊಂದು ದೂರು.
ವಿಚಾರಿಸಿದರೆ,
“ನಾನು ಬಾದರ್ಲಿಯಲ್ಲಿ ಇದ್ದೇನೆ”
ಅಲ್ಲಿಗೆ ಹೋದರೆ “ತುರವಿಹಾಳಗೆ ಬಂದಿದ್ದೇನೆ”
ಅಲ್ಲಿಂದ ಗಾಂಧಿನಗರಕ್ಕೆ ಹೋದರೆ “ನನ್ನ ಆಫೀಸಿನಲ್ಲಿ ಇದ್ದೇನೆ”
ಎಂದು ಹೇಳುತ್ತಾ ಸಾರ್ವಜನಿಕರನ್ನು ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಅಲೆದಾಡಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ.
ಚೇಳಗಳ ಮೂಲಕ ವಸೂಲಿ – ಬೆದರಿಕೆ ದೂರು
ತಾನು ಬಿಜಿಯಾಗಿದ್ದಾಗ ಅಥವಾ ಮೀಟಿಂಗ್ ನೆಪದಲ್ಲಿ ತನ್ನ ಚೇಳಗಳನ್ನು ಕಳುಹಿಸಿ ವಸೂಲಿ ಮಾಡಿಸುತ್ತಾರೆ ಎನ್ನುವುದು ಇನ್ನೊಂದು ಗಂಭೀರ ಆರೋಪ.
ಈ ಚೇಳಗಳು,
“ನಾವು ಫುಡ್ ಇನ್ಸ್ಪೆಕ್ಟರ್” ಎಂದು ಹೇಳಿಕೊಂಡು,
“ನಿಮ್ಮ ಅಂಗಡಿಯಲ್ಲಿ ಇದು ಸರಿ ಇಲ್ಲ, ಅದು ತಪ್ಪಾಗಿದೆ” ಎಂದು ಹೆದರಿಸಿ,
ದುಡ್ಡು ಕೊಡದಿದ್ದರೆ ದಂಡ ಹಾಕುತ್ತೇವೆ ಎಂದು ಬೆದರಿಸುತ್ತಾರೆ ಎಂದು ವ್ಯಾಪಾರಿಗಳು ದೂರಿದ್ದಾರೆ.
ಈ ವೇಳೆ ಯಾರೋ ಅನುಮಾನಾಸ್ಪದ ವ್ಯಕ್ತಿಗಳು ಬಂದಿದ್ದಾರೆ ಎಂದು ಪತ್ರಕರ್ತರಿಗೆ ಅಥವಾ ಅಧಿಕಾರಿಗಳಿಗೆ ಕರೆ ಮಾಡಿದರೆ, ಈ ಚೇಳಗಳು ಅಲ್ಲಿಂದ ಕಾಲ್ಕಿಳಿದು ಹೋಗುತ್ತಾರೆ ಎಂಬ ಆರೋಪವೂ ಕೇಳಿಬಂದಿದೆ.
ಸಾರ್ವಜನಿಕರ ಆಗ್ರಹ – ತಕ್ಷಣ ವಜಾ, ಕಾನೂನು ಕ್ರಮ
ಇಂತಹ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಕುರಿತು, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ – ಶ್ರೀ ಹರ್ಷ ಗುಪ್ತ, ಭಾ.ಆ.ಸೇ. ಹಾಗೂ ಆಹಾರ ಸುರಕ್ಷತಾ ಆಯುಕ್ತರು – ಶ್ರೀ ಶ್ರೀನಿವಾಸ್ ಕೆ, ಐಎಎಸ್ (Shri Srinivas K, IAS) ಇವರು ತಕ್ಷಣ ಮಧ್ಯಪ್ರವೇಶಿಸಿ,
ಭ್ರಷ್ಟ ಅಧಿಕಾರಿ ಡಾ. ಅಯ್ಯನಗೌಡ ಅವರನ್ನು ಹುದ್ದೆಯಿಂದ ವಜಾಗೊಳಿಸಿ, ಕಾನೂನು ರೀತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಇದೀಗ ಎಲ್ಲರ ದೃಷ್ಟಿ – ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳುತ್ತದೆಯೇ?
ಭ್ರಷ್ಟಾಚಾರ ವಿರುದ್ಧ ನ್ಯಾಯ ದೊರಕುತ್ತದೆಯೇ? ಎಂಬುದರ ಮೇಲೆ ನೆಟ್ಟಿದೆ.









