ಮಾರ್ಚ್ 10. ಸಿಂಧನೂರು ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಳಗನೂರು ಗ್ರಾಮದ ಸಂಗಮ ಎಂಬ ಮಹಿಳೆ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿ ವೈದ್ಯರ ನಿರ್ಲಕ್ಷವೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.

ಮೃತದೇಹವನ್ನು ಆಸ್ಪತ್ರೆಗೆ ಮುಂಭಾಗದ ಮುಖ್ಯ ರಸ್ತೆಯಲ್ಲಿ ಇಟ್ಟು ಕೆಲಕಾಲ ರಸ್ತೆ ತಡೆ ನಡೆಸಿದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರೊಂದಿಗೆ ಕೂಡ ಕುಟುಂಬಸ್ಥರು ತೀವ್ರ ವಾಗ್ವಾದ ನಡೆಸಿದರು. “ನೀವು ವೈದ್ಯರನ್ನು ರಕ್ಷಿಸುತ್ತಿದ್ದೀರಿ. ನಿಮ್ಮ ಮನೆಯಲ್ಲಿ ಇಂತಹ ಘಟನೆ ನಡೆದಿದ್ದರೆ ಸುಮ್ಮನೆ ಇರುತ್ತಿದ್ದೀರಾ? ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ” ಎಂದು ಪೊಲೀಸರನ್ನು ಪ್ರಶ್ನಿಸಿದರು.

ಪೊಲೀಸರು ಎಷ್ಟೇ ಸಮಾಧಾನಪಡಿಸಲು ಯತ್ನಿಸಿದರೂ, ಕುಟುಂಬದ ಹಿರಿಯ ಸದಸ್ಯೆಯ ಸಾವಿನಿಂದ ದುಃಖಿತರಾದ ಕುಟುಂಬಸ್ಥರು ವೈದ್ಯರು ಮತ್ತು ಪೊಲೀಸರ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ನಂತರ ಸ್ಥಳಕ್ಕೆ ಆಗಮಿಸಿದ ಆರ್ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಂಪನಗೌಡ ಬಾದರ್ಲಿ ಅವರು ಮೃತಳ ಕುಟುಂಬಸ್ಥರೊಂದಿಗೆ ಮಾತನಾಡಿ ಸಮಾಧಾನಪಡಿಸಿದರು. ಜೊತೆಗೆ ವೈದ್ಯರಿಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಜಾಗೃತಿಯಿಂದ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಮೃತಳ ಕುಟುಂಬದ ಸದಸ್ಯ ಬಸವರಾಜ್ ಜುಲದ ಮಾತನಾಡಿ, “ಆಸ್ಪತ್ರೆಯಲ್ಲಿ ವೈದ್ಯರು ರೋಗಿಗಳನ್ನು ಸರಿಯಾಗಿ ವಿಚಾರಿಸುವುದಿಲ್ಲ, ಚಿಕಿತ್ಸೆ ನೀಡುವುದಿಲ್ಲ. ಫೋನ್ಗಳಲ್ಲಿ ಬ್ಯುಸಿಯಾಗಿರುತ್ತಾರೆ. ಸರಿಯಾದ ಚಿಕಿತ್ಸೆ ನೀಡುವಂತೆ ಕೇಳಿದರೆ ವೈದ್ಯರು ಬೆದರಿಕೆ ಹಾಕುತ್ತಾರೆ. ಹೆಚ್ಚಾಗಿ ಪ್ರಶ್ನಿಸಿದರೆ ಪೊಲೀಸರನ್ನು ಕರೆಸುತ್ತಾರೆ. ಈ ರೀತಿಯ ಘಟನೆಗಳು ಈಗಾಗಲೇ ಸಾಕಷ್ಟು ನಡೆದಿವೆ. ತಪ್ಪು ಯಾರೇ ಮಾಡಿರಲಿ ಅವರಿಗೆ ತಕ್ಕ ಶಿಕ್ಷೆ ಆಗಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಸುರೇಶ್ ಗೌಡ, “ಚಿಕಿತ್ಸೆ ನೀಡುವಲ್ಲಿ ನಾವು ಯಾವುದೇ ರೀತಿಯ ನಿರ್ಲಕ್ಷ ವಹಿಸಿಲ್ಲ. ರೋಗಿಯ ವಯಸ್ಸು ಹೆಚ್ಚಾಗಿದ್ದು, ನಮ್ಮಿಂದ ಸಾಧ್ಯವಿದ್ದ ಎಲ್ಲಾ ಚಿಕಿತ್ಸೆ ನೀಡಿದ್ದೇವೆ. ನಮ್ಮಿಂದ ಯಾವುದೇ ತಪ್ಪಾಗಿಲ್ಲ. ಆದರೂ ಕುಟುಂಬಸ್ಥರ ನೋವನ್ನು ಮನಗಂಡು ಕ್ಷಮೆ ಕೇಳಿದ್ದೇವೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಗಮನ ಹರಿಸುತ್ತೇವೆ” ಎಂದು ಹೇಳಿದರು.
ಘಟನೆಯ ಸಂಬಂಧವಾಗಿ ಪೊಲೀಸರು ಸ್ಥಳದಲ್ಲಿ ಬಂದೋಬಸ್ತ್ ಕೈಗೊಂಡು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.













