ಲಿಂಗಸಗೂರು/ರಾಯಚೂರು:
ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಓ) ಒಬ್ಬರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಲಿಂಗಸಗೂರು ತಾಲೂಕಿನ ಗೊರೇಬಾಳ ತಾಂಡಾದ ಚೇತನ ತಂದೆ ಲೋಕಪ್ಪ ಅವರು ದನದ ಶೆಡ್ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯಧನ ಮಂಜೂರಾಗಿದ್ದರೂ, ಆ ಹಣ ಬಿಡುಗಡೆ ಮಾಡಲು ಗೋರೆಬಾಳ ಗ್ರಾಮ ಪಂಚಾಯತಿಯ ಪಿ.ಡಿ.ಓ ಮಹ್ಮದ ಖಾಜಾ ಅವರು ₹15,000 ಲಂಚ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಸಂಬಂಧ ಚೇತನ ಅವರು ದಿನಾಂಕ 22-11-2017 ರಂದು ಅಂದಿನ ಎ.ಸಿ.ಬಿ. ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ದೂರು ಆಧಾರವಾಗಿ ಪೊಲೀಸರು ಪ್ರಕರಣ ದಾಖಲಿಸಿ, ಅದೇ ದಿನ ಟ್ರಾಪ್ ಕಾರ್ಯಾಚರಣೆ ನಡೆಸಿ, ₹15,000 ಲಂಚ ಸ್ವೀಕರಿಸುತ್ತಿದ್ದ ವೇಳೆ ಆರೋಪಿಯನ್ನು ಬಂಧಿಸಿದ್ದರು.
ನಂತರ ತನಿಖೆ ಪೂರ್ಣಗೊಂಡು, ಪೋಲಿಸ್ ಇನ್ಸಪೆಕ್ಟರ್ ಶ್ರೀಧರ ದೊಡ್ಡಿ ಅವರು ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ರಾಯಚೂರು ಜಿಲ್ಲೆಯ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಲಿಂಗಸಗೂರು ಪೀಠದ ಮಾನ್ಯ ನ್ಯಾಯಾಧೀಶರಾದ ಬಿ.ಬಿ. ಜಕಾತಿ ಅವರು ದಿನಾಂಕ 10-04-2026 ರಂದು ತೀರ್ಪು ನೀಡಿದರು.
ತೀರ್ಪಿನಂತೆ, ಆರೋಪಿಗೆ ಭ್ರಷ್ಟಾಚಾರ ತಡೆ ಕಾಯ್ದೆ 1988ರ ಕಲಂ 7ರಡಿ 3 ವರ್ಷ ಜೈಲು ಶಿಕ್ಷೆ ಮತ್ತು ₹25,000 ದಂಡ, ಹಾಗೂ ಕಲಂ 13(1)(ಡಿ) ಸಹಿತ 13(2) ಅಡಿಯಲ್ಲಿ 4 ವರ್ಷ ಜೈಲು ಶಿಕ್ಷೆ ಮತ್ತು ₹50,000 ದಂಡ ವಿಧಿಸಲಾಗಿದೆ.
ಇದೇ ವೇಳೆ, ಪ್ರಕರಣದ ಪಿರ್ಯಾದಿದಾರ ಚೇತನ ಅವರು ನ್ಯಾಯಾಲಯದಲ್ಲಿ ಪ್ರತಿಕೂಲ ಸಾಕ್ಷಿ ನೀಡಿರುವುದು ಗಮನಕ್ಕೆ ಬಂದಿದೆ. ಇದರಿಂದ ಸರಕಾರಿ ಅಭಿಯೋಜಕರು ಕ್ರಮ ಕೈಗೊಳ್ಳುವಂತೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಅದನ್ನು ಪರಿಗಣಿಸಿ, ಪಿರ್ಯಾದಿದಾರನ ವಿರುದ್ಧ ಸುಳ್ಳು ಸಾಕ್ಷಿ ನೀಡಿದ ಹಿನ್ನೆಲೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶಿಸಿದೆ.
ಈ ಪ್ರಕರಣದಲ್ಲಿ ಲೋಕಾಯುಕ್ತ ಪರವಾಗಿ ಸರಕಾರಿ ಅಭಿಯೋಜಕರಾದ ಕೆ. ಬಸವರಾಜ ಹೊಸಳ್ಳಿ (ಕೆ) ಅವರು ವಾದ ಮಂಡಿಸಿದ್ದು, ಅಯ್ಯಪ್ಪ ಪೊಲೀಸ್ ಪೇದೆ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಸಹಕರಿಸಿದರು.
ಈ ಕುರಿತು ಮಾಹಿತಿ ನೀಡಿರುವ ಸರಕಾರಿ ಅಭಿಯೋಜಕರಾದ ಕೆ. ಬಸವರಾಜ ಹೊಸಳ್ಳಿ ಅವರು, ನ್ಯಾಯಾಲಯದ ತೀರ್ಪು ಭ್ರಷ್ಟಾಚಾರ ವಿರುದ್ಧ ಹೋರಾಟಕ್ಕೆ ಮತ್ತಷ್ಟು ಬಲ ನೀಡಲಿದೆ ಎಂದು ತಿಳಿಸಿದ್ದಾರೆ.









