ಜೋಳ ಖರೀದಿ ಕೇಂದ್ರಗಳಲ್ಲಿ ಅಕ್ರಮಗಳ ಆರ್ಭಟ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
📍ಸಿಂಧನೂರು | ಮಾರ್ಚ್ 31
2025-26ನೇ ಸಾಲಿನ ಕೇಂದ್ರ ಸರ್ಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ ರಾಗಿ, ಭತ್ತ ಹಾಗೂ ಬಿಳಿ ಜೋಳ ಖರೀದಿ ಕೇಂದ್ರಗಳು ಆರಂಭಗೊಂಡಿದ್ದರೂ, ಜಿಲ್ಲೆಯ ಜೋಳ ಖರೀದಿ ಕೇಂದ್ರಗಳಲ್ಲಿ ಅಕ್ರಮಗಳ ಸರಮಾಲೆ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ರೈತರಿಂದ ಅಧಿಕೃತ ದರಕ್ಕಿಂತ ಹೆಚ್ಚುವರಿ ಹಣವನ್ನು “ಅಮಾಲಿ ವೆಚ್ಚ” ಎಂಬ ಹೆಸರಿನಲ್ಲಿ ವಸೂಲಿ ಮಾಡಲಾಗುತ್ತಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಈ ಕುರಿತು ಹಲವು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದು, ರೈತರು ಹಾಗೂ ವಿವಿಧ ಸಂಘಟನೆಗಳು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಆದರೂ ಕೂಡ ಜಿಲ್ಲಾ ಮತ್ತು ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗಳು ಯಾವುದೇ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿವೆ ಎಂಬ ಟೀಕೆ ವ್ಯಕ್ತವಾಗುತ್ತಿದೆ.
🟡 ಅರ್ಹತೆ ಇಲ್ಲದ ಗುಣಮಟ್ಟ ಪರಿವೀಕ್ಷಕರು!
ಜಿಲ್ಲೆಯ ಎಲ್ಲಾ ಖರೀದಿ ಕೇಂದ್ರಗಳಲ್ಲಿ ಖಾಸಗಿ ಏಜೆನ್ಸಿಗಳ ಮೂಲಕ ಗುಣಮಟ್ಟ ಪರಿವೀಕ್ಷಕರನ್ನು ನೇಮಕ ಮಾಡಲಾಗಿದ್ದು, ಕೆಲವೆಡೆ ಅರ್ಹತೆ ಇಲ್ಲದ ಹಾಗೂ ಪರಿಶೀಲನೆ ಮಾಡಲು ತಿಳಿಯದವರನ್ನೇ ಕೆಲಸಕ್ಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಭೇಟಿ ನೀಡಿದಾಗ ಈ ಆರೋಪಗಳು ಸತ್ಯವೆಂದು ಬೆಳಕಿಗೆ ಬಂದಿದೆ.
ಸಾರ್ವಜನಿಕರು ಪ್ರಶ್ನಿಸಿದಾಗ ಕೆಲವರು “ನಮಗೆ ಪೂರ್ಣ ತಿಳುವಳಿಕೆ ಇಲ್ಲ, ನಾವು ಹೇಳಿದಂತೆ ಮಾಡುತ್ತಿದ್ದೇವೆ. ದಯವಿಟ್ಟು ವಿಷಯವನ್ನು ದೊಡ್ಡದಾಗಿಸಬೇಡಿ” ಎಂದು ಹೇಳಿಕೊಂಡಿರುವುದು ಅಕ್ರಮಗಳ ತೀವ್ರತೆಯನ್ನು ತೋರಿಸುತ್ತದೆ.
🟡 ಯುವಕರನ್ನು ಬಳಸಿಕೊಂಡು ದಂಧೆ?
ಅಕ್ರಮವಾಗಿ ದಂಧೆ ನಡೆಸುವವರು ಅನುಭವವಿಲ್ಲದ ಯುವಕರನ್ನು ಗುಣಮಟ್ಟ ಪರಿಶೀಲನೆಗಾಗಿ ಬಳಸಿಕೊಂಡು, ಕೇವಲ OTP ನೀಡುವ ಮೂಲಕ ದಾಖಲೆ ಪಾಸ್ ಮಾಡಿಸುವ ವ್ಯವಸ್ಥೆ ನಡೆಯುತ್ತಿದೆ ಎಂಬ ಆತಂಕಕಾರಿ ಮಾಹಿತಿ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.
ಸಿಬ್ಬಂದಿ ವರ್ತನೆಗೆ ಅನುಮಾನಗಳ ನೆರಳು!
ಈ ಸಂಬಂಧ ಗುಣಮಟ್ಟ ಪರಿವೀಕ್ಷಕರ ಸಂಯೋಜಕರನ್ನು ಸಂಪರ್ಕಿಸಿದಾಗ, ಆರಂಭದಲ್ಲಿ “ನಮ್ಮ ಗಮನಕ್ಕೆ ಬಂದಿಲ್ಲ, ಪರಿಶೀಲನೆ ನಡೆಸುತ್ತೇವೆ” ಎಂದು ಪ್ರತಿಕ್ರಿಯೆ ನೀಡಿದರೂ, ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಕರೆ ಮಾಡಿ “ಸುದ್ದಿ ಮಾಡಬೇಡಿ” ಎಂದು ಮನವಿ ಮಾಡಿದ ಘಟನೆ ಸಂಶಯಕ್ಕೆ ಕಾರಣವಾಗಿದೆ.
ಇನ್ನೊಂದೆಡೆ, ಖಾಸಗಿ ಏಜೆನ್ಸಿಯ ದಾಖಲೆ ಪರಿಶೀಲನಾ ಸಿಬ್ಬಂದಿ ಮಾಧ್ಯಮದವರೊಂದಿಗೆ ಅಹಂಕಾರದಿಂದ ಮಾತನಾಡಿ, “ನೀವು ಏನು ಮಾಡುತ್ತೀರೋ ಮಾಡಿಕೊಳ್ಳಿ” ಎಂದು ಪ್ರತಿಕ್ರಿಯೆ ನೀಡಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಈ ರೀತಿಯ ವಿರೋಧಾಭಾಸದ ಹೇಳಿಕೆಗಳು ಮತ್ತು ಅಸಹಕಾರದ ಧೋರಣೆ ಕಂಡುಬಂದ ಹಿನ್ನೆಲೆಯಲ್ಲಿ, ಖರೀದಿ ಕೇಂದ್ರಗಳಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಕೆಲವು ಸಿಬ್ಬಂದಿ ಪರೋಕ್ಷವಾಗಿ ಸಹಕಾರ ನೀಡುತ್ತಿರುವ ಸಾಧ್ಯತೆ ಇದೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ
🟥 ತಕ್ಷಣ ಕ್ರಮಕ್ಕೆ ಒತ್ತಾಯ
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರೈತರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜಿಲ್ಲಾ-ತಾಲೂಕು ಟಾಸ್ಕ್ ಫೋರ್ಸ್ ಸಮಿತಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.










