
ಸಾರ್ವಜನಿಕರಲ್ಲಿ ಆತಂಕ – ಪೊಲೀಸರು ಕೂಡಲೇ ಎಚ್ಚೆತ್ತುಕೊಳ್ಳುವಂತೆ ಒತ್ತಾಯ


ಸಾಧು–ಸಂತರ ವೇಷದಲ್ಲಿ ಸಂಚರಿಸುತ್ತಿರುವ ಖದೀಮರ ತಂಡ ಸಿಂಧನೂರಿನಲ್ಲಿ ತಮ್ಮ ಕೈಚಳಕ ಪ್ರದರ್ಶಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಸಾರ್ವಜನಿಕರಲ್ಲಿ ಭೀತಿ ಮತ್ತು ಆತಂಕ ಮೂಡಿಸಿದೆ. ಮಂಕುಬೂದಿ ಎರಚಿ, ಭವಿಷ್ಯ ಹೇಳುವ ನೆಪದಲ್ಲಿ ಹಣ ಹಾಗೂ ಬಂಗಾರ ದೋಚಿದ ಘಟನೆ ನಗರದ ಕುಷ್ಟಗಿ ಮುಖ್ಯರಸ್ತೆಯ ಕೂಡಲಸಂಗಮ ಚಿತ್ರಮಂದಿರ ಎದುರುಗಡೆ ಇರುವ ಶ್ರೀ ಸಾಯಿ ಮೆಡಿಕಲ್ ಅಂಡ್ ಜನರಲ್ ಸ್ಟೋರ್ನಲ್ಲಿ ನಡೆದಿದೆ.
ಮೇ 12ರಂದು ಮಂಗಳವಾರ ಬೆಳಗ್ಗೆ ಸುಮಾರು 10 ಗಂಟೆ ವೇಳೆಗೆ ಸಾಧುವಿನ ವೇಷದಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ಮೆಡಿಕಲ್ ಅಂಗಡಿಗೆ ಭೇಟಿ ನೀಡಿದ್ದಾನೆ. ಅಂಗಡಿ ಮಾಲೀಕರಾದ ಟಿಂಕು ದತ್ ಅವರ ಪತಿ ವಿಷ್ಣು ದತ್ ಅವರು ಸಹಾನುಭೂತಿಯಿಂದ ಫ್ರಿಡ್ಜ್ನಲ್ಲಿದ್ದ ತಣ್ಣೀರು ನೀಡಿದ್ದು, ಬಿಸಿಲಿನಿಂದ ಬಂದಿದ್ದೇವೆ ಎಂದು ಹೇಳಿದ ವ್ಯಕ್ತಿಗೆ ಮಾನವೀಯತೆಯಿಂದ ಆತಿಥ್ಯ ನೀಡಿದ್ದಾರೆ.
ನೀರು ಕುಡಿದ ಬಳಿಕ ಭವಿಷ್ಯ ಹೇಳುವ ನೆಪದಲ್ಲಿ ಎರಡು ಹೂಗಳನ್ನು ವಿಷ್ಣು ದತ್ ಅವರಿಗೆ ನೀಡಿದ ಆರೋಪಿಯು, “ಇದನ್ನು ವಾಸನೆ ನೋಡಿ” ಎಂದು ಹೇಳಿದ್ದಾನೆ. ಹೂವನ್ನು ವಾಸನೆ ನೋಡಿದ ಕೆಲವೇ ಕ್ಷಣಗಳಲ್ಲಿ ವಿಷ್ಣು ದತ್ ಅವರಿಗೆ ಮಬ್ಬು ಬಡಿದಂತಾಗಿ, ತಾವು ಏನು ಮಾಡುತ್ತಿದ್ದಾರೆ ಎಂಬ ಅರಿವೇ ಇಲ್ಲದಂತಾಗಿದೆ ಎಂದು ತಿಳಿದುಬಂದಿದೆ.

ಈ ಸಂದರ್ಭವನ್ನು ಬಳಸಿಕೊಂಡ ಖದೀಮನು ಗಲ್ಲಾಪಟ್ಟಿಗೆಯಲ್ಲಿದ್ದ ₹10,500 ನಗದು ಹಾಗೂ ವಿಷ್ಣು ದತ್ ಅವರ ಕೈಯಲ್ಲಿದ್ದ ಅರ್ಧ ತೊಲೆಯ ಬಂಗಾರದ ಉಂಗುರವನ್ನು ಪಡೆದು ಪರಾರಿಯಾಗಿದ್ದಾನೆ. ಬಳಿಕ ಸ್ವಲ್ಪ ಸಮಯದ ನಂತರ ಚೇತರಿಸಿಕೊಂಡ ವಿಷ್ಣು ದತ್ ಅವರಿಗೆ ತಾವು ಮೋಸ ಹೋಗಿರುವುದು ಗೊತ್ತಾಗಿದೆ.
“ನನಗೆ ಏನೂ ಅರ್ಥವಾಗಲಿಲ್ಲ. ಅವನು ಹೇಗೆ ಕೇಳಿದ, ನಾನು ಹೇಗೆ ಕೊಟ್ಟೆ ಎಂಬುದೇ ಗೊತ್ತಾಗುತ್ತಿಲ್ಲ. ನನ್ನ ತಲೆ ಮೇಲೆ ಬಿಳಿ ಬಟ್ಟೆ ಹಾಕಿ ಮಂಕುಮಾಡಿ ಹಣ ಮತ್ತು ಉಂಗುರ ತೆಗೆದುಕೊಂಡು ಹೋಗಿದ್ದಾನೆ,” ಎಂದು ವಿಷ್ಣು ದತ್ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ಘಟನೆಯ ಸಂಬಂಧ ಅವರು ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆದರೆ ಇದೇ ರೀತಿಯ ಸಾಧು–ಸಂತರ ವೇಷದಲ್ಲಿ ಸಂಚರಿಸುವ ಖದೀಮರ ತಂಡ ನಗರದಲ್ಲಿ ಓಡಾಡುತ್ತಿರುವ ಮಾಹಿತಿ ಲಭ್ಯವಾಗಿದ್ದು, ಒಂಟಿ ಮಹಿಳೆಯರು, ಮನೆಗಳು ಹಾಗೂ ವ್ಯಾಪಾರಸ್ಥರನ್ನು ಗುರಿಯಾಗಿಸಿಕೊಂಡು ವಂಚನೆ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ನಗರದಲ್ಲಿ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ. ಅಪರಿಚಿತ ವ್ಯಕ್ತಿಗಳು ಪೂಜೆ, ಭವಿಷ್ಯ ಹೇಳುವುದು ಅಥವಾ ಮಂಕುಬೂದಿ ನೀಡುವ ನೆಪದಲ್ಲಿ ಸಂಪರ್ಕಿಸಿದರೆ ಯಾರೂ ನಂಬಬಾರದು ಎಂದು ನಾಗರಿಕರು ಎಚ್ಚರಿಸಿದ್ದಾರೆ.
ಇದೇ ವೇಳೆ, ಪೊಲೀಸರು ಕೂಡಲೇ ಎಚ್ಚೆತ್ತುಕೊಂಡು ಇಂತಹ ಘಟನೆಗಳು ಮರುಕಳಿಸದಂತೆ ನಗರದಲ್ಲಿ ಗಸ್ತು ಹೆಚ್ಚಿಸಬೇಕು, ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿ ಖದೀಮರ ತಂಡವನ್ನು ಶೀಘ್ರ ಬಂಧಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ನಗರದಲ್ಲಿ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿರುವುದರಿಂದ ಪೊಲೀಸ್ ಇಲಾಖೆ ತಕ್ಷಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.
https://youtube.com/shorts/TbOz9nbfxE0?si=dPtkav7Crub7EX6P










