ರಾಯಚೂರು,ಏಪ್ರಿಲ್ 23: BB NEWS KANNADA
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬಿ.ವಿ.ಆರ್ (BVR) ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸುಖದೇವ್ ಅಪೂರ್ವ ಸಾಧನೆ ಮಾಡಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲೆಯ ಗೌರವವನ್ನು ಹೆಚ್ಚಿಸಿದ್ದಾನೆ.
ಸುಖದೇವ್ 625ಕ್ಕೆ 625 ಅಂಕಗಳನ್ನು ಸಂಪೂರ್ಣವಾಗಿ ಗಳಿಸುವ ಮೂಲಕ ತನ್ನ ಪ್ರತಿಭೆಯನ್ನು ಮೆರೆದಿದ್ದಾನೆ. ಪ್ರಥಮ ಭಾಷೆಯಲ್ಲಿ 125 ಅಂಕಗಳು, ದ್ವಿತೀಯ ಭಾಷೆಯಲ್ಲಿ 100 ಅಂಕಗಳು, ಹಿಂದಿಯಲ್ಲಿ 100, ಗಣಿತದಲ್ಲಿ 100, ವಿಜ್ಞಾನದಲ್ಲಿ 100 ಹಾಗೂ ಸಮಾಜ ವಿಜ್ಞಾನದಲ್ಲಿ 100 ಅಂಕಗಳನ್ನು ಪಡೆದು ಎಲ್ಲ ವಿಷಯಗಳಲ್ಲಿಯೂ ಶೇ.100 ಫಲಿತಾಂಶ ಸಾಧಿಸಿರುವುದು ವಿಶೇಷವಾಗಿದೆ.
ಈ ಅಪೂರ್ವ ಸಾಧನೆಗೆ ಮಾನ್ವಿ ತಾಲೂಕಿನ ತಹಸೀಲ್ದಾರ್ ಭೀಮರಾಯ ಬಿ. ರಾಮಸಮುದ್ರ, ಕ್ಷೇತ್ರ ಶಿಕ್ಷಣಾಧಿಕಾರಿ (BEO), ಹಾಗೂ ಬಿ.ವಿ.ಆರ್ ಶಾಲೆಯ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವಿದ್ಯಾರ್ಥಿಯನ್ನು ಸನ್ಮಾನಿಸಿ ಅಭಿನಂದಿಸಿದರು. ಅವರ ಈ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ ಎಂದು ಪ್ರಶಂಸಿಸಿದರು.
ಇದೇ ವೇಳೆ, ರಾಯಚೂರು ಜಿಲ್ಲೆಯ ಸಂಸದರಾದ ಜಿ. ಕುಮಾರ್ ನಾಯಕ ಅವರು ದೂರವಾಣಿ ಮೂಲಕ ಸುಖದೇವ್ ಅವರನ್ನು ಸಂಪರ್ಕಿಸಿ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿ, ಅವರ ಸಾಧನೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು.
ಸುಖದೇವ್ ಅವರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ಪಾಲಕರ ಸಹಕಾರವೇ ಈ ಯಶಸ್ಸಿನ ಹಿಂದೆ ಇರುವ ಪ್ರಮುಖ ಕಾರಣವೆಂದು ತಿಳಿದುಬಂದಿದೆ.
ಜಿಲ್ಲೆಯ ಮಟ್ಟದಲ್ಲಿ ಇಂತಹ ಸಾಧನೆ ಹೊರತಂದಿರುವುದು ಎಲ್ಲರಲ್ಲೂ ಹರ್ಷವನ್ನುಂಟುಮಾಡಿದ್ದು, ವಿದ್ಯಾರ್ಥಿಗೆ ಭವಿಷ್ಯದಲ್ಲಿ ಇನ್ನಷ್ಟು ಉನ್ನತ ಸಾಧನೆಗಳಾಗಲಿ ಎಂಬ ಆಶಯ ವ್ಯಕ್ತವಾಗಿದೆ.









