600ಕ್ಕೆ 603 ಅಂಕ! ಪಿಯುಸಿ ಫಲಿತಾಂಶದಲ್ಲಿ ಭಾರೀ ಗೊಂದಲ – ವಿದ್ಯಾರ್ಥಿನಿ, ಪಾಲಕರಲ್ಲಿ ಆತಂಕ
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಗ್ರಾಮವೊಂದರ ವಿದ್ಯಾರ್ಥಿನಿಗೆ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ 600 ಅಂಕಗಳಿಗೆ 603 ಅಂಕ ನೀಡಿರುವ ಘಟನೆ ಭಾರೀ ಸಂಚಲನಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಪ್ರಕಟಿಸಿದ ಫಲಿತಾಂಶದಲ್ಲಿ ಈ ಗಂಭೀರ ದೋಷ ಕಂಡುಬಂದಿದ್ದು, ವಿದ್ಯಾರ್ಥಿನಿ ಹಾಗೂ ಪಾಲಕರಲ್ಲಿ ಆತಂಕ ಹೆಚ್ಚಿಸಿದೆ.
ಮಾನ್ವಿ ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಈ ವರ್ಷ ಪರೀಕ್ಷೆ ಬರೆದಿದ್ದು, ಫಲಿತಾಂಶದಲ್ಲಿ ಗರಿಷ್ಠ ಅಂಕಗಳಿಗಿಂತಲೂ ಹೆಚ್ಚು ಅಂಕಗಳು ಬಂದಿರುವುದು ಎಲ್ಲರನ್ನೂ ಆಶ್ಚರ್ಯಕ್ಕೀಡಾಗಿಸಿದೆ.

⚠️ ಕಾಲೇಜು ಆಡಳಿತದ ಪ್ರತಿಕ್ರಿಯೆ
ಈ ಕುರಿತು ಸಂಬಂಧಪಟ್ಟ ಕಾಲೇಜಿನ ಆಡಳಿತ ಮಂಡಳಿಯನ್ನು ಸಂಪರ್ಕಿಸಿದಾಗ, “ಈ ವಿಷಯ ನಮ್ಮ ಗಮನಕ್ಕೂ ಬಂದಿದೆ. ಇದರಲ್ಲಿ ನಾವು ನೇರವಾಗಿ ಏನೂ ಮಾಡಲು ಸಾಧ್ಯವಿಲ್ಲ. ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳಿಗೆ ತಿಳಿಸುತ್ತೇವೆ. ಕಳೆದ ವರ್ಷಗಳಲ್ಲೂ 600ಕ್ಕೆ 657 ಅಂಕಗಳು ಬಂದ ಉದಾಹರಣೆಗಳಿವೆ. ಈ ಪ್ರಕರಣದಲ್ಲಿಯೂ ಅಧಿಕಾರಿಗಳು ಪರಿಶೀಲಿಸಿ ಸರಿಪಡಿಸುತ್ತಾರೆ” ಎಂದು ತಿಳಿಸಿದ್ದಾರೆ.
😟 ವಿದ್ಯಾರ್ಥಿನಿ ಹಾಗೂ ಪಾಲಕರಲ್ಲಿ ಆತಂಕ
ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಪರೀಕ್ಷೆ ಬರೆದ ಬಳಿಕ ಇಂತಹ ಫಲಿತಾಂಶದ ದೋಷಗಳು ಉಂಟಾದರೆ, ತಮ್ಮ ನಿಜವಾದ ಅಂಕಗಳು ಯಾವುವು ಎಂಬುದೇ ತಿಳಿಯದ ಸ್ಥಿತಿ ಉಂಟಾಗುತ್ತದೆ. ಈ ಘಟನೆ ವಿದ್ಯಾರ್ಥಿನಿ ಹಾಗೂ ಆಕೆಯ ಪಾಲಕರಲ್ಲಿ ಆತಂಕ ಮೂಡಿಸಿದೆ. ಪಾಲಕರು ಕೂಡಲೇ ಈ ದೋಷವನ್ನು ಸರಿಪಡಿಸಿ ನಿಖರವಾದ ಫಲಿತಾಂಶ ನೀಡಬೇಕೆಂದು ಆಗ್ರಹಿಸಿದ್ದಾರೆ.
🔥 ವಿದ್ಯಾರ್ಥಿ ಸಂಘಟನೆಗಳ ಆಕ್ರೋಶ
ಈ ಕುರಿತು ವಿದ್ಯಾರ್ಥಿ ಸಂಘಟನೆಯ ಮುಖಂಡ ಪ್ರವೀಣ್ ಕುಮಾರ್ ಧುಮುತಿ ತೀವ್ರ ಆಕ್ರೋಶ ವ್ಯಕ್ತಪಡಿಸಿ,“600ಕ್ಕೆ 603 ಅಂಕ ನೀಡಿರುವುದು ವ್ಯವಸ್ಥೆಯ ವೈಫಲ್ಯವೇ ಅಥವಾ ಅಕ್ರಮವೇ ಎಂಬುದು ತನಿಖೆಯಾಗಬೇಕು. ಫಲಿತಾಂಶದ ದೋಷಗಳಿಂದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಎಡವಟ್ಟಿನಿಂದ ಅನಾಹುತಗಳು ಸಂಭವಿಸಿದರೆ ಅದಕ್ಕೆ ಯಾರು ಹೊಣೆ?”ಎಂದು ಪ್ರಶ್ನಿಸಿದ್ದಾರೆ. ಅವರು ಮುಂದುವರಿಸಿ, “ಪರೀಕ್ಷಾ ಮಂಡಳಿ ಹಾಗೂ ಮೌಲ್ಯಮಾಪನದಲ್ಲಿ ನಡೆದಿರುವ ಲೋಪದೋಷಗಳನ್ನು ತಕ್ಷಣ ಸರಿಪಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಪ್ರವೀಣ್ ಕುಮಾರ್ ಧುಮುತಿ ಒತ್ತಾಯಿಸಿದ್ದಾರೆ.
⚖️ ತಕ್ಷಣ ಕ್ರಮಕ್ಕೆ ಒತ್ತಾಯ
ಈ ಘಟನೆಯ ಹಿನ್ನೆಲೆದಲ್ಲಿ ಸಾರ್ವಜನಿಕರು ಹಾಗೂ ಪಾಲಕರು, ಫಲಿತಾಂಶದ ಗೊಂದಲವನ್ನು ತಕ್ಷಣ ನಿವಾರಿಸಿ, ನಿಖರ ಅಂಕಗಳನ್ನು ಪ್ರಕಟಿಸುವಂತೆ ಹಾಗೂ ಇಂತಹ ದೋಷಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ಆಗ್ರಹಿಸಿದ್ದಾರೆ.









