BB NEWS KANNADA
ಏಪ್ರಿಲ್ 11
ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದ ಎಕ್ಸಲೆಂಟ್ ಪದವಿ ಮಹಾವಿದ್ಯಾಲಯದಲ್ಲಿ ಅಹಿಂದ ವಿದ್ಯಾರ್ಥಿ ಯುವಜನ ಒಕ್ಕೂಟ, ಸಿಂಧನೂರು ತಾಲೂಕ ವತಿಯಿಂದ “ಸಂವಿಧಾನಿಕ ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ಐಕ್ಯತೆ ಬಲಗೊಳಿಸುವ” ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಕಾನೂನು ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಜ್ಯೋತಿ ಬಾಪುಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು. ಹಿರಿಯ ವಕೀಲರಾದ ರಾಯಪ್ಪ ಅವರು ಕಾನೂನು ಪಾಲನೆಯ ಮಹತ್ವ, ವಿದ್ಯಾರ್ಥಿಗಳ ಶಿಸ್ತು ಮತ್ತು ಶಿಕ್ಷಣದ ಅಗತ್ಯತೆ ಕುರಿತು ವಿವರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಿ.ವೈ.ಎಸ್.ಪಿ ಚಂದ್ರಶೇಖರ್ ನಾಯಕ್ ಅವರು ಸೈಬರ್ ಕ್ರೈಮ್ ಮತ್ತು ಸಾಮಾಜಿಕ ಜಾಲತಾಣಗಳ ದುರುಪಯೋಗ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು. “ಮೊಬೈಲ್ ದಾಸರಾಗಬೇಡಿ, ವಿದ್ಯಾವಂತರಾಗಿ ಪ್ರಜ್ಞಾವಂತರಾಗಿ. ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಹಿಡಿಯುವುದಕ್ಕಿಂತ ಪುಸ್ತಕ ಹಿಡಿದು ಓದಿ. ರೀಲ್ಸ್ ನೋಡುವ ಬದಲು ರಿಯಲ್ ಲೈಫ್ ಕಡೆ ಗಮನ ಹರಿಸಿ” ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇದೇ ವೇಳೆ ಅವರು ಗೌತಮ ಬುದ್ಧ ಅವರ ಪಂಚಶೀಲ ತತ್ವಗಳನ್ನು ವಿವರಿಸಿ, ಅಹಿಂಸೆ, ಸತ್ಯಸಂಧತೆ, ಪ್ರಾಮಾಣಿಕತೆ, ಶೀಲಪಾಲನೆ ಮತ್ತು ಮಾದಕ ವಸ್ತುಗಳ ತ್ಯಾಗವು ವ್ಯಕ್ತಿತ್ವ ವಿಕಾಸಕ್ಕೆ ಅಗತ್ಯವೆಂದು ಹೇಳಿದರು. “ಈ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಶಾಂತಿಯುತ ಸಮಾಜ ನಿರ್ಮಾಣ ಸಾಧ್ಯ” ಎಂದು ಅಭಿಪ್ರಾಯಪಟ್ಟರು.
ಅವರ ಭಾಷಣದಲ್ಲಿ ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್, ಸಾಮ್ರಾಟ್ ಅಶೋಕ, ಕಾರ್ಲ್ ಮಾರ್ಕ್ಸ್ ಹಾಗೂ ಶಿಶುನಾಳ ಶರೀಫ್ ಅವರ ತತ್ವಗಳನ್ನೂ ಉಲ್ಲೇಖಿಸಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿರೇಶ್ ಉಪ್ಪಲದೊಡ್ಡಿ ಅವರು ಮಹಿಳಾ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿದರು. ಪ್ರವೀಣ್ ದುಮತಿ ಅವರು ಮಹನೀಯರ ಹಾದಿಯನ್ನು ಅನುಸರಿಸುವ ಅಗತ್ಯತೆಯನ್ನು ತಿಳಿಸಿದರು. ಉಮೇಶ್ ಅವರು ಸಂವಿಧಾನದ ಅನುಚ್ಚೇದ 19 ಮತ್ತು 21ರ ಕುರಿತು ಹಾಗೂ ಶಿಕ್ಷಣ-ಉದ್ಯೋಗದ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ನೀಡಿದರು.
ನಂತರ ಮಾತನಾಡಿದ ಹಿರಿಯ ವಕೀಲರಾದ ರಾಯಪ್ಪ ಅವರು ತಮ್ಮ ಜೀವನ ಅನುಭವಗಳನ್ನು ಹಂಚಿಕೊಂಡು, “ನಾವು ಕಷ್ಟಪಟ್ಟು ಓದಿ ಇಂದಿನ ಮಟ್ಟಕ್ಕೇರಿದ್ದೇವೆ. ಈಗಿನ ವಿದ್ಯಾರ್ಥಿಗಳಿಗೆ ಎಲ್ಲಾ ಸೌಕರ್ಯಗಳಿವೆ. ದಿನಕ್ಕೆ 3-4 ಗಂಟೆ ಓದಿದರೂ ಸಾಕು, ನೀವು ಯಶಸ್ವಿಯಾಗಬಹುದು. ಮೊಬೈಲ್ಗಳಿಗೆ ದಾಸರಾಗದೆ ಶಿಕ್ಷಣದ ಕಡೆ ಗಮನ ಹರಿಸಿ” ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಡಿ.ವೈ.ಎಸ್.ಪಿ ಚಂದ್ರಶೇಖರ್, ರಾಯಪ್ಪ ವಕೀಲರು, ಪತ್ರಕರ್ತರಾದ ಎಸ್.ಎಸ್. ಜಿನೂರು, ದಲಿತ ಮುಖಂಡ ವೆಂಕಟೇಶ್ ಗಿರಿಜಾಲಿ, ಪ್ರಾಂಶುಪಾಲರಾದ ಮಂಜುನಾಥ್ ಸೋಮಲಾಪುರ, ಉಪನ್ಯಾಸಕರಾದ ಎಂ. ವೆಂಕರಾವ್, ಖಾಸಿಂ ಖುರೆಸಿ, ಬಸವರಾಜ್ ಯಾಪಲಪರ್ವಿ, ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು, ನೈತಿಕ ಮೌಲ್ಯಗಳು ಹಾಗೂ ಶಿಕ್ಷಣದ ಮಹತ್ವವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿತು.









